– ಕೆಲಸ ಮಾಡಕ್ಕೆ ಆಗಲ್ಲ ಅಂದ್ರೆ ಟ್ರಾನ್ಸ್ಫರ್ ಮಾಡಿಸಿಕೊಂಡು ಹೋಗಿ
ಚಿಕ್ಕಬಳ್ಳಾಪುರ: “ಥೂ ನಿಮ್ಮನ್ನ ಬೈದು ನಮಗೆ ಬಿಪಿ ಬರುತ್ತೆ. ದನಕಾಯೋಕೆ ಹೋಗಿ, ಕೆಲಸ ಮಾಡಕೆ ಆಗಲ್ಲ ಅಂದರೆ ವರ್ಗಾವಣೆ ಮಾಡಿಸಿಕೊಂಡು ಹೋಗಿ” ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರು ಜಿಲ್ಲಾ ಮಟ್ಟದ ಕ್ರೀಡಾ ಯುವಜನಸೇವಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಕ್ರೀಡಾ ಯುವಜನ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ರುದ್ರಪ್ಪಗೆ ಜಿ.ಪ ಅಧ್ಯಕ್ಷ ಎಚ್.ವಿ ಮಂಜುನಾಥ್ ಹಾಗೂ ಜಿ.ಪ ಸದಸ್ಯರು ಸೇರಿದಂತೆ ಜಿ.ಪ ಸಿಇಓ ಸಹ ತರಟೆಗೆ ತೆಗೆದುಕೊಂಡರು.
ನಿಮ್ಮ ಕೈಯಲ್ಲಿ ಕೆಲಸ ಮಾಡೋಕೆ ಆಗೋದಿಲ್ಲ ಅಂದರೆ ವರ್ಗಾವಣೆ ಮಾಡಿಕೊಂಡು ಹೊರಟು ಹೋಗಿ ಎಂದರು. ಬಳಿಕ ಅಧ್ಯಕ್ಷರು ಹಾಗೂ ಸದಸ್ಯರ ದೂರುಗಳಿಂದ ಎಚ್ಚೆತ್ತಾ ಜಿಲ್ಲಾ ಪಂಚಾಯತ್ ಸಿಇಓ ಗುರುದತ್ ಹೆಗಡೆ ಅವರು ರುದ್ರಪ್ಪರನ್ನ ಸೇವೆಯಿಂದ ವಿಮುಕ್ತಿಗೊಳಿಸಿ, ಬೇರೆಯವರನ್ನ ನಿಯೋಜಿಸುವಂತೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಎಚ್ಚರಿಕೆ ನೀಡಿದರು.
ಚಿಂತಾಮಣಿ ನಗರದ ಕ್ರೀಡಾಂಗಣದಲ್ಲಿನ ಮಳಿಗೆಗೆಳ ಬಾಡಿಗೆ ಒಂದೂವರೆ ಕೋಟಿ ಬಾಕಿ ಇದ್ದು, ಎರಡು ವರ್ಷಗಳಿಂದ ಹಣ ವಸೂಲಿ ಮಾಡದೇ ರುದ್ರಪ್ಪ ಕರ್ತವ್ಯಲೋಪ ತೋರಿದ್ದಾರೆ. ಈ ಬಗ್ಗೆ ಕೇಳಿದರೆ ಕ್ಷೇತ್ರದ ಶಾಸಕ ಜೆ.ಕೆ ಕೃಷ್ಣಾರೆಡ್ಡಿ ಇದಕ್ಕೆ ತಡೆ ಒಡ್ಡಿದ್ದಾರೆ ಎಂದು ಆರೋಪಿಸಿದ್ದು, ಇದರಿಂದ ಕೆರಳಿದ ಅಧ್ಯಕ್ಷರು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಷ್ಟೇ ಅಲ್ಲದೆ ಕ್ರೀಡಾಂಗಣಗಳಲ್ಲಿನ ಶೌಚಾಲಯಗಳ ಸ್ವಚ್ಛತೆ ಕಾಪಾಡುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ. ಜಿಲ್ಲಾ ಕ್ರೀಡಾಂಗಣದಲ್ಲಿನ ಈಜುಕೊಳದ ನಿರ್ವಹಣೆ ಸಹ ಸಮರ್ಪಕವಾಗಿ ಮಾಡುತ್ತಿಲ್ಲ ಎಂದು ಜಿ.ಪ ಸದಸ್ಯರು ರುದ್ರಪ್ಪ ವಿರುದ್ಧ ಕೆಂಡಾಮಂಡಲರಾದರು. ಈ ವೇಳೆ ರೋಸಿ ಹೋದ ಜಿ.ಪಂ ಅಧ್ಯಕ್ಷ ಮಂಜುನಾಥ್ ಅವರು ಪ್ರತಿ ಬಾರಿ ಸಭೆಯಲ್ಲೂ ಇದೇ ವಿಷಯ ಬಗ್ಗೆ ಚರ್ಚೆ ನಡೆಯುತ್ತದೆ. ಪದೇ ಪದೇ ಚರ್ಚೆ ಆಗುತ್ತಿದ್ದರೂ ನೀವು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಜಿಲ್ಲಾ ಮಟ್ಟದ ಅಧಿಕಾರಿಯಾಗಲು ನಿಮಗೆ ಅರ್ಹತೆಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.