ಮಂಡ್ಯ: ಎಣ್ಣೆ ಕೊಡ್ಲಿಲ್ಲ ಅನ್ನೋ ಕಾರಣಕ್ಕೆ ಯುವಕರು ಮದ್ಯದಂಗಡಿ ಎದುರು ಮಾರಕಾಸ್ತ್ರ ಹಿಡಿದು ಓಡಾಡಿ ಆತಂಕ ಸೃಷ್ಟಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ.
ಇಬ್ಬರು ಯುವಕರು ಕೆಆರ್ ಎಸ್ನ ಬಾರ್ ಗೆ ಬಂದು ಹಣ ಕೊಡದೇ ಎಣ್ಣೆ ಕೊಡುವಂತೆ ಕೇಳಿದ್ದಾರೆ. ಆದ್ರೆ ಇದಕ್ಕೆ ಅಂಗಡಿ ಕೆಲಸಗಾರರು ಒಪ್ಪಲ್ಲ. ಈ ವೇಳೆ ಬೈಕಿನಲ್ಲಿ ಬಂದ ಯುವಕನೊಬ್ಬ ಮಾರಾಕಾಸ್ತ್ರ ಹಿಡಿದು ಓಡಾಡಿದ್ದಾನೆ. ನಂತರ ಅವರ ಜೊತೆಯಲ್ಲಿ ಇದ್ದ ಯುವಕರೇ ಆತನಿಂದ ಮಾರಾಕಾಸ್ತ್ರ ಕಿತ್ತುಕೊಂಡು ಬೈಕಿನಲ್ಲಿ ಹೊರಟು ಹೋಗಿದ್ದಾರೆ.
ನಂತರವೂ ಸುಮ್ಮನಿರದ ಇಬ್ಬರು ಯುವಕರು ಅಂಗಡಿ ಬಳಿ ಬಂದು ಮಾತಿನ ಚಕಮಕಿ ನಡೆಸಿ ಸ್ಥಳದಿಂದ ಹೊರಟು ಹೋಗಿದ್ದಾರೆ. ರಾತ್ರಿ ಕೆಲಸ ಮುಗಿಸಿ ಹೋಗುತ್ತಿದ್ದ ಅಂಗಡಿ ಸಿಬ್ಬಂದಿ ಮೇಲೆ ಯುವಕರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕೆಆರ್ಎಸ್ ಪೊಲೀಸರು, ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಸಚಿನ್ ಎಂಬಾತನನ್ನು ಬಂಧಿಸಿದ್ದಾರೆ. ಭೈರ ಎಂಬ ಮತ್ತೊಬ್ಬ ಪರಾರಿಯಾಗಿದ್ದಾನೆ.