ದಾವಣಗೆರೆ: ಜಕಾತಿ ಹಣ ನೀಡದಿದ್ದಕ್ಕೆ ಸೊಪ್ಪಿನ ವ್ಯಾಪಾರ ಮಾಡುತ್ತಿದ್ದ ವೃದ್ಧನ ತಕ್ಕಡಿ ತೆಗೆದುಕೊಂಡು ಹೋಗಿ ಯುವಕರು ದರ್ಪ ಮೆರೆದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ನಗರದ ಕೆ.ಆರ್ ಮಾರುಕಟ್ಟೆ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ವ್ಯಾಪಾರಿಗಳು ಹಾಗೂ ರೈತರು ತಮ್ಮ ತರಕಾರಿ ಮತ್ತಿತರ ಸಾಮಾಗ್ರಿಗಳನ್ನು ಮಾರಾಟ ಮಾಡಲು ಬಂದಿರುತ್ತಾರೆ. ಅಂತವರ ಬಳಿ ಪಾಲಿಕೆ ವತಿಯಿಂದ ನೆಲದ ಶುಲ್ಕವನ್ನು ಪಡೆಯಲು ಟೆಂಡರ್ ಪಡೆದಿರುತ್ತಾರೆ. ಆದರೆ ಕೆಲ ಟೆಂಡರ್ ದಾರರು ವ್ಯಾಪಾರಸ್ಥರ ಹಾಗೂ ರೈತರ ಮೇಲೆ ರೌಡಿಸಂ ಮಾಡುತ್ತಿದ್ದಾರೆ.
ಯುವಕರ ಗುಂಪೊಂದು ವ್ಯಾಪಾರ ಮಾಡುತ್ತಿದ್ದ ವೃದ್ಧನೊಬ್ಬನ ಮೇಲೆ ದರ್ಪ ತೋರಿದೆ. ಅಲ್ಲದೆ ವ್ಯಾಪಾರ ಇನ್ನು ಆಗಿಲ್ಲ ಆಮೇಲೆ ಜಕಾತಿ ಹಣ ನೀಡುತ್ತೇವೆ ಎಂದು ಪರಿಪರಿಯಾಗಿ ಕೇಳಿಕೊಂಡರು ತಕ್ಕಡಿಯನ್ನು ತೆಗೆದುಕೊಂಡು ದರ್ಪ ಮೆರೆದಿದ್ದಾರೆ. ನಂತರ ವೃದ್ಧ ನಿಸ್ಸಾಹಯಕತನದಿಂದ ಹಣವನ್ನು ನೀಡಿ ಕಳುಹಿಸಿದ್ದಾರೆ.
ಜಕಾತಿ ಶುಲ್ಕವನ್ನು ವ್ಯಾಪಾರವಾದ ನಂತರ ಪಡೆಯಬೇಕು. ಅದನ್ನು ಬಿಟ್ಟು ವ್ಯಾಪಾರಕ್ಕಿಂತ ಮೊದಲೇ ಹಣ ವಸೂಲಿ ಮಾಡಲು ಯುವಕರ ಗುಂಪು ದರ್ಪ ಮೆರೆದಿದೆ. ಯುವಕರು ರೌಡಿಸಂ ಮಾಡುತ್ತಿರುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.