ಕೊಪ್ಪಳ: ಕಲ್ಲು ಮಣ್ಣಿನಿಂದ ಮುಚ್ಚಿ ಹೋಗಿದ್ದ ಹಾಲಬಾವಿಯನ್ನು ಯುವಕರು ಹೂಳೆತ್ತಿ ಸ್ವಚ್ಛಗೊಳಿಸಿದ್ದರಿಂದ ಈಗ ನೀರಿನ ಸೆಲೆ ಬಂದಿದೆ.
ಕೊಪ್ಪಳದ ಕುಷ್ಟಗಿ ತಾಲೂಕಿನ ಹನುಮಸಾಗರದ ಸೋಮಶಂಕರ ದೇವಸ್ಥಾನದಲ್ಲಿರುವ ಬಾವಿಯನ್ನು ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮುದಾಯದ ಯುವಕರು ಹೂಳೆತ್ತಿ ಸ್ವಚ್ಛಗೊಳಿಸಿದ್ದಾರೆ. ನೂರಾರು ವರ್ಷ ಹಳೆಯದಾದ 35 ಅಡಿ ಅಗಲವಿರುವ ಬಾವಿಗೆ ಕಲ್ಲು, ಮಣ್ಣು ಬಿದ್ದು ಮುಳ್ಳಿನ ಗಿಡಗಳು ಬೆಳೆದಿದ್ದವು. ಇದರಿಂದ ಬಾವಿ ಮುಚ್ಚಿ ಹೋಗಿತ್ತು.
ಬೆಳಗ್ಗೆ ಯುವಕರು ವಾಯುವಿಹಾರಕ್ಕೆ ಹೋಗುತ್ತಿದ್ದಾಗ ಈ ಬಾವಿ ಮುಚ್ಚಿರುವುದನ್ನು ಗಮನಿಸಿದ್ದಾರೆ. ಮುಚ್ಚಿದ ಬಾವಿಯನ್ನು ಸ್ವಚ್ಛ ಮಾಡುತ್ತಿದ್ದಾಗ ನೀರಿನ ಸೆಲೆ ಬಂದಿದೆ.
ಈಗ ಬೇಸಿಗೆಗಾಲ ಶುರುವಾಗಿದ್ದು, ಎಲ್ಲೆಲ್ಲೂ ನೀರಿನ ಸಮಸ್ಯೆ ಎದುರಾಗುತ್ತಿದೆ. ಮನುಷ್ಯರಿಗೆ ಕುಡಿಯುಲು ನೀರು ಸಿಗುತ್ತಿಲ್ಲ. ಆದರೆ ಈ ಬಾವಿ ಸ್ವಚ್ಛತೆಯಿಂದ ಬೇಸಿಗೆಯಲ್ಲಿ ನೀರಿನ ಸೆಲೆ ಬಂದಿರುವುದು ಸಂತಸ ತಂದಿದೆ. ಇದರಿಂದ ಪ್ರಾಣಿ ಪಕ್ಷಿ ಸಂಕುಲಕ್ಕೆ ದಾಹ ತೀರಿದರೆ ನಮ್ಮ ಪರಿಶ್ರಮ ಸಾರ್ಥಕ ಎಂದು ಯುವಕರು ಸಂತೋಷ ವ್ಯಕ್ತಪಡಿಸಿದ್ದಾರೆ.