ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದೆ. ಕಾಂಗ್ರೆಸ್ ಅಭ್ಯರ್ಥಿ, ಯುವ ನಾಯಕ ಮಿಥುನ್ ರೈ ಪರವಾಗಿ ಭರ್ಜರಿ ಕ್ಯಾಂಪೇನ್ ನಡೆದಿದೆ.
ಮಿಥುನ್ ರೈ ಪರವಾಗಿ ಕೆಲವು ಕಡೆ ಯುವಕರ ತಂಡ ಸ್ವಯಂಪ್ರೇರಿತರಾಗಿ ಫೀಲ್ಡಿಗಿಳಿದಿದ್ದಾರೆ. ನಗರದ ಕೂಳೂರಿನ ಶೇ.50ರಷ್ಟು ಯುವಕರು ತಮ್ಮದೇ ದುಡ್ಡಿನಲ್ಲಿ ಮಿಥುನ್ ರೈ ಫೋಟೋ ಮತ್ತು ಚಿಹ್ನೆ ಇರುವ ಟಿ ಶರ್ಟ್ ಹಾಕಿಕೊಂಡು ಪ್ರಚಾರ ಆರಂಭಿಸಿದ್ದಾರೆ.
ಯಾವುದೇ ಪಕ್ಷದ ಕಾರ್ಯಕರ್ತರು ಅಲ್ಲ ಎಂದು ಹೇಳಿಕೊಳ್ಳುವ ಈ ಯುವಕರು, ನಾಡಿನ ಸಮಸ್ಯೆಗಳ ಬಗ್ಗೆ ಗೊತ್ತಿರುವ ವಿದ್ಯಾವಂತ ಸಂಸದನ ಆಯ್ಕೆ ಆಗಬೇಕೆಂಬ ನೆಲೆಯಲ್ಲಿ ಮನೆ, ಮನೆಗೆ ಭೇಟಿ ನೀಡಿ ಪ್ರಚಾರ ನಡೆಸುತ್ತಿದ್ದಾರೆ.
ಮೋದಿ ಅಲೆಯ ವಿರುದ್ಧ ಯುವ ಐಕಾನ್ ಹೆಸರಲ್ಲಿ ಯುವಕರು ಅಭಿಯಾನ ನಡೆಸುತ್ತಿದ್ದಾರೆ. ಮಂಗಳೂರಿನ ಉರ್ವಾಸ್ಟೋರ್ ವ್ಯಾಪ್ತಿಯ ದಂಬೆಲ್, ಉರ್ವಾ ಮಾರ್ಕೆಟ್, ಹೊಯ್ಗೆ ಬೈಲ್, ಅಶೋಕನಗರ ಪರಿಸರದಲ್ಲಿ ಯಾವುದೇ ಮುಖಂಡರ ಸಾಥ್ ಇಲ್ಲದೆ ಸ್ವಯಂಪ್ರೇರಿತ ಪ್ರಚಾರ ನಡೆಸುತ್ತಿರುವುದು ಗಮನ ಸೆಳೆದಿದೆ.
ಬಿಜೆಪಿಯಿಂದ ನಳಿನ್ ಕುಮಾರ್ ಕಟೀಲ್ ಅವರು ಈ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಇಳಿದಿದ್ದಾರೆ.