ಚಿಕ್ಕಬಳ್ಳಾಪುರ: ಅಪ್ಪ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಯುವಕನೊಬ್ಬ ಮೊಬೈಲಿನಲ್ಲಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಚಿಂತಾಮಣಿ ತಾಲೂಕಿನ ವೈಜಕೂರು ಗ್ರಾಮದ ಮಧು(23) ಮೃತ ಯುವಕ. ಈತ ಅಪ್ಪ ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ಕ್ರೀಮಿನಾಶಕ ಕುಡಿದು ಸಾಯುತ್ತಿದ್ದೇನೆ. ಅನ್ಯಾಯವಾಗಿ ನನ್ನನ್ನು ನೀನು ಕಳೆದುಕೊಂಡುಬಿಟ್ಟೆ ಎಂದು ಮೊಬೈಲಿನಲ್ಲಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಗ್ರಾಮದ ಅಶ್ವತ್ಥಪ್ಪ ಮತ್ತು ನೀಲಮ್ಮ ದಂಪತಿಯ ಪುತ್ರನಾದ ಮೃತ ಮಧು ಟ್ರಾಕ್ಟರ್ ಮಾಲೀಕನಾಗಿದ್ದನು. ಟ್ರ್ಯಾಕ್ಟರ್ ಮೂಲಕ ಇಟ್ಟಿಗೆ, ಗೊಬ್ಬರ ಸಾಗಿಸಿ ಬಂದ ಹಣದಿಂದ ಬದುಕು ಕಟ್ಟಿಕೊಂಡಿದ್ದ. ಆದರೆ ಆಗಾಗ ವಿನಾಕಾರಣ ಮನೆ ಬಿಟ್ಟು ಹೋಗುತ್ತಿದ್ದ ಎನ್ನಲಾಗಿದೆ. ಹೀಗಾಗಿ ತಂದೆ ಬುದ್ಧಿವಾದ ಹೇಳಿ ಎರಡು ಏಟು ಹೊಡೆದಿದ್ದರಂತೆ. ಇದರಿಂದ ಮನನೊಂದ ಮಧು ಕಳೆದ 9 ದಿನಗಳ ಹಿಂದೆ ಕೋಲಾರದ ಹುಲಿಕಲ್ಲು ಗ್ರಾಮದ ಜಮೀನೊಂದರಲ್ಲಿ ಕ್ರೀಮಿನಾಶಕ ಕುಡಿದಿದ್ದಾನೆ. ನಂತರ ಮೊಬೈಲ್ನಲ್ಲಿ ವಿಡಿಯೋ ಮಾಡಿದ್ದು, ಅದರಲ್ಲಿ ತನ್ನ ತಂದೆಗೆ ತಾನು ತಪ್ಪು ಮಾಡಿಲ್ಲ ಎಂದು ಹೇಳಿಕೊಂಡಿದ್ದನು.
ಜಮೀನಿನಲ್ಲಿ ಯುವಕ ಬಿದ್ದಿರುವುದನ್ನು ಕಂಡ ರೈತರು ಆತನನ್ನ ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ 8 ದಿನಗಳ ನಂತರ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಯುವಕ ಮೃತಪಟ್ಟ ನಂತರ ಮೊಬೈಲ್ ವಿಡಿಯೋ ವೈರಲ್ ಆಗುತ್ತಿದೆ.
ಮಧು ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ವೈಜಕೂರು ಗ್ರಾಮದ ಯುವಕನಾಗಿದ್ದು, ವಿಡಿಯೋದಲ್ಲಿ ತನ್ನ ತಾಯಿ ಹಾಗೂ ತಮ್ಮನನ್ನು ಚೆನ್ನಾಗಿ ನೋಡಿಕೊಳ್ಳುವಂತೆ ತಂದೆಗೆ ಮನವಿ ಮಾಡಿಕೊಂಡಿದ್ದಾನೆ.