ರಾಮನಗರ: ಹಣ ಕೊಡಲಿಲ್ಲ ಎಂದು ಯುವತಿಗೆ ಯುವಕನೋರ್ವ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ರಾಮಸಂದ್ರ ಗ್ರಾಮದಲ್ಲಿ ನಡೆದಿದೆ.
ರಾಮಸಂದ್ರ ಗ್ರಾಮದ 21 ವರ್ಷದ ಕಾವ್ಯ ಕೊಲೆಯಾದ ದುರ್ದೈವಿ. ಅದೇ ಗ್ರಾಮದ ವೆಂಕಟೇಶ್ ಕೊಲೆ ಮಾಡಿದ ಆರೋಪಿ. ಮೃತಳ ತಾಯಿ ರಾತ್ರಿ ವ್ಯಾಪಾರ ಮುಗಿಸಿ ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.
ಹಣಕ್ಕಾಗಿ ಪೀಡಿಸುತ್ತಿದ್ದ ವೆಂಕಟೇಶ್ ಬುಧವಾರದಂದು ಕಾವ್ಯಳ ಬಳಿ ಹಣವಿರುವುದನ್ನು ಕಂಡಿದ್ದಾನೆ. ಹಣದ ಅವಶ್ಯಕತೆ ಹೆಚ್ಚಾಗಿದ್ದ ಕಾರಣ ವೆಂಕಟೇಶ್ ರಾತ್ರಿ ಕಾವ್ಯಳ ಬಳಿ ಹಣಕ್ಕಾಗಿ ಪೀಡಿಸಿದ್ದಾನೆ. ಆದ್ರೆ ಹಣ ನೀಡಲು ಕಾವ್ಯ ಒಪ್ಪದಿದ್ದಾಗ ಚಾಕುವಿನಿಂದ ಇರಿದಿದ್ದಾನೆ. ಚಾಕು ಇರಿತಕ್ಕೆ ಒಳಗಾದ ಕಾವ್ಯ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಘಟನೆ ಸಂಬಂಧ ಕುಂಬಳಗೋಡು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಪರಾರಿಯಾಗಿದ್ದ ಆರೋಪಿ ವೆಂಕಟೇಶ್ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.