ಬೆಂಗಳೂರು: ಗುರಾಯಿಸಿದ ಕಾರಣಕ್ಕೆ ಯುವಕನೊಬ್ಬನನ್ನು ಕೊಲೆ ಮಾಡಿರುವ ಘಟನೆ ನಗರದ ಮುದ್ದಿನಪಾಳ್ಯದಲ್ಲಿ ನಡೆದಿದೆ.
ಮಲ್ಲತ್ತಹಳ್ಳಿ ನಿವಾಸಿ ಅರುಣ್(22) ಕೊಲೆಯಾದ ದುರ್ದೈವಿ. ಶನಿವಾರ ರಾತ್ರಿ ಮುದ್ದಿನಪಾಳ್ಯದ ಮಾರುತಿ ಬಾರಿಗೆ ಅರುಣ್ ಸ್ನೇಹಿತರ ಜೊತೆ ಮದ್ಯ ಖರೀದಿಸಲು ತೆರಳಿದ್ದನು. ಈ ವೇಳೆ ಬಾರಿನಲ್ಲಿದ್ದ ಮೂವರು ಯಾಕೋ ಗುರಾಯಿಸುತ್ತಿದ್ದೀಯ ಎಂದು ಗಲಾಟೆ ಶುರು ಮಾಡಿದ್ದಾರೆ. ಗಲಾಟೆ ವಿಕೋಪಕ್ಕೆ ತಿರುಗಿ ಅರುಣ್ಗೆ ಚಾಕುವಿನಿಂದ ಇರಿದಿದ್ದಾರೆ.
ಅರುಣ್ ಜೊತೆಯಲ್ಲಿದ್ದ ಕಿಶನ್ ಎಂಬಾತನಿಗೂ ಚಾಕುವಿನಿಂದ ಇರಿದಿದ್ದಾರೆ. ತಕ್ಷಣವೇ ಅಲ್ಲಿದ್ದವರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅರುಣ್ ಎದೆ ಭಾಗಕ್ಕೆ ತೀವ್ರವಾಗಿ ಗಾಯವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಸದ್ಯಕ್ಕೆ ಕಿಶನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈ ಘಟನೆ ಸಂಬಂಧ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.