ತುಮಕೂರು: ನಡು ರಸ್ತೆಯಲ್ಲಿ ಬೈಕ್ ವೀಲಿಂಗ್ ಮಾಡಿದ್ದನ್ನು ಪ್ರಶ್ನಿಸಿದಕ್ಕೆ ಪುಂಡರ ಗುಂಪೊಂದು ಯುವಕನೋರ್ವನಿಗೆ ಚಾಕು ಇರಿದ ಘಟನೆ ನಡೆದಿದೆ.
ಜಿಲ್ಲೆಯ ಪಾವಗಡ ಪಟ್ಟಣದ ಪೊಲೀಸ್ ಠಾಣೆ ಸಮೀಪ ಈ ಘಟನೆ ಸಂಭವಿಸಿದೆ. ದವಡಬೆಟ್ಟ ತಾಂಡಾದ ಯುವಕರು ಒಂದೇ ಸಮನೆ ಬೈಕ್ ವೀಲಿಂಗ್ ಮಾಡುತ್ತಿದ್ದರು. ಅದನ್ನು ಕಂಡ ಪಾದಾಚಾರಿ ಯುವಕ ತೇಜು ಪ್ರಶ್ನಿಸಿದ್ದಾನೆ.
ತೇಜು ಪ್ರಶ್ನೆಯಿಂದ ಕೋಪಗೊಂಡ ಪುಂಡರ ತಂಡ ಯುವಕ ತೇಜು ಮೇಲೆ ಹಿಗ್ಗಾಮುಗ್ಗವಾಗಿ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಚಾಕುವಿನಿಂದ ಕುತ್ತಿಗೆ ಮತ್ತು ಬೆನ್ನಿನ ಭಾಗಕ್ಕೆ ಇರಿದಿದ್ದಾರೆ. ಪರಿಣಾಮ ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳುವನ್ನು ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ.
ಘಟನೆಯ ಬಳಿಕ ಪರಾರಿಯಾಗಿದ್ದ ಆರೋಪಿಗಳಾದ ಶ್ರೀನಿವಾಸದ ನಾಯ್ಕ್, ಧನಸಿಂಗ್ ನಾಯ್ಕ್, ರಾಜೇಶ್ ನಾಯ್ಕ್, ಹಾಗೂ ಶೇಖರ್ ನಾಯಕರನ್ನು ಪಾವಗಡ ಪೊಲೀಸರು ಬಂಧಿಸಿದ್ದಾರೆ.