ರಾಯಚೂರು: ಖಾಸಗಿ ಕಟ್ಟಡ ನಿರ್ಮಾಣಕ್ಕಾಗಿ ತೋಡಿದ್ದ ಗುಂಡಿಯಲ್ಲಿ ಆಕಸ್ಮಿಕವಾಗಿ ಬಿದ್ದಿದ್ದ ಬಾಲಕಿಯನ್ನು ಯುವಕ ರಕ್ಷಣೆ ಮಾಡಿದ್ದಾನೆ.
ನಗರದ ರೇಸ್ ಬಚಪನ್ ಶಾಲೆಯ ಬಳಿಯಲ್ಲಿ ತೊಡಿರುವ ಗುಂಡಿಯಲ್ಲಿ ವಿದ್ಯಾರ್ಥಿನಿ ಆಕಸ್ಮಿಕವಾಗಿ ಬಿದ್ದಿದ್ದಾಳೆ. ಬಾಲಕಿಯನ್ನು ರಕ್ಷಣೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಟ್ಟಡಕ್ಕಾಗಿ ನಿರ್ಮಿಸಿದ ಗುಂಡಿಯನ್ನು ಬಹಳ ದಿನಗಳಿಂದ ಮುಚ್ಚಿರಲಿಲ್ಲ. ಇತ್ತೀಚೆಗೆ ಸುರಿದ ಮಳೆಗೆ ಗುಂಡಿ ನೀರಿನಿಂದ ತುಂಬಿಕೊಂಡಿತ್ತು. ಗುಂಡಿ ಪಕ್ಕದಲ್ಲಿ ಹೋಗುತ್ತಿದ್ದ ಬಾಲಕಿ ಕಾಲು ಜಾರಿ ಬಿದ್ದಿದ್ದಾಳೆ. ಇದನ್ನು ಗಮನಿಸಿದ ಯುವಕ ಕೂಡಲೇ ಗುಂಡಿಗೆ ಜಿಗಿದು ಈಜಿ ಬಾಲಕಿಯನ್ನು ರಕ್ಷಿಸಿದ್ದಾನೆ.
ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡಿದ್ದರಿಂದ ಈಗ ಬೆಳಕಿಗೆ ಬಂದಿದೆ. ಈ ಘಟನೆಯ ನಂತರ ಗುಂಡಿಯ ಸುತ್ತ ತಗಡಿನ ಟಿನ್ ತಡೆಗೋಡೆ ಹಾಕಿದ್ದಾರೆ. ಯುವಕನ ಸಾಹಸಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಬಾಲಕಿ ಹಾಗೂ ರಕ್ಷಣೆ ಮಾಡಿದ ಯುವಕನ ಹೆಸರು ತಿಳಿದು ಬಂದಿಲ್ಲ.