ಬಾಗಲಕೋಟೆ: ಸ್ನೇಹಿತರೊಟ್ಟಿಗೆ ಮನೆ ಮುಂದೆ ಗೋಲಿ ಆಡುತ್ತಿದ್ದ ಬಾಲಕನಿಗೆ ಯುವಕನೋರ್ವ ಬೈದಿದ್ದಕ್ಕೆ ಆತನನ್ನು ಹತ್ಯೆಗೈದ ಅಮಾನವೀಯ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ಹೀರೇನಸಬಿ ಗ್ರಾಮದಲ್ಲಿ ನಡೆದಿದೆ.
ಕೊಲೆಗೀಡಾದ ಯುವಕನನ್ನು ಹೀರೇನಸಬಿ ಗ್ರಾಮದ ನಿವಾಸಿ ರೆಹಮಾನ್ ಸಾಬ್ ಜಗಾಪುರ(25) ಎಂದು ಗುರುತಿಸಲಾಗಿದೆ. ಹೀರೇನಸಬಿ ಗ್ರಾಮದ ನಿವಾಸಿಗಳಾದ ಹನುಮಂತ ವಡ್ಡರ್, ಮಂಜುನಾಥ ವಡ್ಡರ್, ರೇಣವ್ವ ವಡ್ಡರ್, ಶಂಕ್ರವ್ವ ವಡ್ಡರ್ ಯುವಕನನ್ನು ಕೊಲೆ ಮಾಡಿದ್ದಾರೆ. ಪ್ರತಿ ದಿನ ರೆಹಮಾನ್ ಕುಡಿದು ಬಂದು ಗೋಲಿ ಆಡುವ ಮಕ್ಕಳಿಗೆ ಬಾಯಿಗೆ ಬಂದಹಾಗೆ ಬೈದು ಆಟವಾಡಲು ತೊಂದರೆ ಕೊಡುತ್ತಿದ್ದ. ಇದನ್ನು ಕಂಡ ಮಕ್ಕಳ ಮನೆಯವರು ಕುಡಿದವನ ಜೊತೆ ಜಗಳ ಬೇಡವೆಂದು ಸುಮ್ಮನಿದ್ದರು.
ಮಂಗಳವಾರ ರಾತ್ರಿ ರೆಹಮಾನ್ ಮಕ್ಕಳು ಗೋಲಿ ಆಡುತ್ತಿದ್ದಾಗ ಕುಡಿದು ಬಂದು ಅವರಿಗೆ ಬೈದು ಗಲಾಟೆ ಮಾಡಿದಾಗ ಬಾಲಕನೊಬ್ಬನ ಮನೆಯವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ರೆಹಮಾನ್ ಹಾಗೂ ಬಾಲಕನ ಕುಟುಂಬಸ್ಥರ ನಡುವೆ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದ್ದು, ಅವರ ನಡುವೆ ಹೊಡೆದಾಟ ನಡೆದಿದೆ. ಈ ಸಂದರ್ಭದಲ್ಲಿ ತೀವ್ರ ಗಾಯಗೊಂಡ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಸದ್ಯ ಘಟನಾ ಸ್ಥಳಕ್ಕೆ ಡಿಎಸ್ಪಿ ಗಿರಿಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಾದಾಮಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.