ಬೆಂಗಳೂರು: ಚಿಕ್ಕಂದಿನಿಂದಲೂ ಒಳ್ಳೇಯ ಸ್ನೇಹಿತರಾಗಿದ್ದು, ಅಲ್ಲದೇ ಮೂರು ವರ್ಷಗಳ ಹಿಂದೆ ಜೀವನವನ್ನರಸಿ ದೂರದ ಊರಿಂದ ಬೆಂಗಳೂರಿಗೂ ಬಂದಿದ್ದರು. ಆದರೆ ಹುಡುಗಿ ವಿಚಾರಕ್ಕೆ ಇದೀಗ ಈ ಕುಚುಕು ಗೆಳೆಯರ ನಡುವೆ ಗಲಾಟೆಯಾಗಿ ಅದು ರಕ್ತಪಾತದಲ್ಲಿ ಅಂತ್ಯವಾಗಿದೆ.
ಗೆಳೆಯನಿಂದಲೇ ಚಾಕು ಇರಿತಕ್ಕೆ ಒಳಗಾಗಿ ಆಸ್ಪತ್ರೆ ಬೆಡ್ ಮೇಲೆ ಕೊನೆಯುಸಿರೆಳೆದ ಈತನ ಹೆಸರು ಅಬ್ಬು ಅಲಿಯಾಸ್ ನಜ್ಮಲ್ ಹುಸೇನ್. ಮಂಗಳವಾರ ಸುಮಾರು 9.30ರ ವೇಳೆಗೆ ಕೆ.ಆರ್ ಮಾರ್ಕೆಟ್ ಬಳಿಯ ಖುರೇಷಿ ಮಸೀದಿ ಹಿಂಭಾಗ ಈತನ ಪಕ್ಕೆಲುಬು, ಎದೆ ಭಾಗಕ್ಕೆ ಗೆಳೆಯರೇ ಚಾಕು ಹಾಕಿದ್ದರು. ನಂತರ ರಕ್ತದ ಮಡುವಿನಲ್ಲಿದ್ದ ಅಬ್ಬುವನ್ನು ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಅಬ್ಬು ಕೊನೆಯುಸಿರೆಳೆದಿದ್ದಾನೆ ಎಂದು ಡಿಸಿಪಿ ರವಿ.ಡಿ.ಚೆನ್ನಣ್ಣನವರ್ ಅವರು ಹೇಳಿದ್ದಾರೆ.
ಮೃತ ಅಬ್ಬು ಮೂಲತಃ ಮಣಿಪುರದ ಖಲೀಂಗಂಜ್ ಜಿಲ್ಲೆಯವನು. ಶಿವಾಜಿನಗರದ ಬಾರ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದನು. ಹುಡುಗಿ ವಿಚಾರಕ್ಕೆ ಊರಿನ ಗೆಳೆಯ ಜುಮ್ಮಾಖಾನ್ ಜೊತೆ ಗಲಾಟೆ ಮಾಡಿಕೊಂಡಿದ್ದನು. ಇದೇ ವಿಚಾರವಾಗಿ ಮಾತನಾಡಲು ಕರೆಯಿಸಿ ಅಬ್ಬುಗೆ ಚಾಕು ಹಾಕಿ ಪರಾರಿಯಾಗಿದ್ದಾನೆ.
ಸದ್ಯಕ್ಕೆ ಈ ಘಟನೆ ಸಂಬಂಧ ಕೆ.ಆರ್.ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಚಿಕ್ಕಪೇಟೆ ಎಸಿಪಿ ನಿರಂಜನ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ ಎಂದು ರವಿ.ಡಿ.ಚೆನ್ನಣ್ಣನವರ್ ಅವರು ತಿಳಿಸಿದ್ದಾರೆ.