ಗದಗ: ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಯುವಕನೋರ್ವ ತನ್ನ ಎರಡೂ ಕಾಲುಗಳನ್ನ ಕಳೆದುಕೊಂಡಿರುವ ಘಟನೆ ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆ ಆಲೂರು ರೈಲು ನಿಲ್ದಾಣದಲ್ಲಿ ನಡೆದಿದೆ.
ರಾಜಸ್ಥಾನ ಮೂಲದ 30 ವರ್ಷದ ಸುಲ್ತಾನ್ ರಾಮ್ ಚಂಪಾ ಎರಡು ಕಾಲು ಕಳೆದುಕೊಂಡ ದುರ್ದೈವಿ. ಹೊಳೆ ಆಲೂರು ನಿಲ್ದಾಣದಲ್ಲಿ ರೈಲು ಇಳಿದು ವಾಟರ್ ಬಾಟಲ್ ತೆಗೆದುಕೊಂಡು ಹೋಗುವಾಗ ರೈಲು ಮುಂದಕ್ಕೆ ಚಲಿಸಿದೆ. ಈ ವೇಳೆ ಓಡಿ ಹೋಗಿ ಹತ್ತುವ ವೇಳೆ ಕಾಲು ಜಾರಿ ಕೆಳಗೆ ಬಿದ್ದು ಹಳಿಗೆ ಸಿಲುಕಿ ಕಾಲು ಕಳೆದುಕೊಂಡಿದ್ದಾರೆ.
ತನ್ನ ಎರಡು ಕಾಲುಗಳು ಕಟ್ ಆದ ಬಳಿಕ ಸುಲ್ತಾನ್ ತಾನೇ ಕಾಲನ್ನು ಮರಳಿ ಜೊಡಿಸಿಕೊಳ್ಳಲು ಯತ್ನಿಸುತ್ತಿದ್ದ ದೃಶ್ಯ ಹೃದಯ ಕಲಕುವಂತಿತ್ತು. ಪ್ರತ್ಯಕ್ಷದರ್ಶಿಗಳು ಇದನ್ನ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ.
ಕೂಡಲೇ ಸ್ಥಳೀಯರು 108 ಅಂಬುಲೆನ್ಸ್ ಮೂಲಕ ಸುಲ್ತಾನ್ನನ್ನು ರೋಣ ಆಸ್ಪತ್ರೆಗೆ ಸಾಗಿಸಿದ್ರು. ಬಳಿಕ ವೈದ್ಯರ ಸಲಹೆಯಂತೆ ಗದಗ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದು, ಜಿಮ್ಸ್ ಆಸ್ಪತ್ರೆಯಲ್ಲಿ ಸುಲ್ತಾನ್ ಗೆ ಚಿಕಿತ್ಸೆ ನೀಡಲಾಗ್ತಿದೆ.
ಈ ಬಗ್ಗೆ ಗದಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.