– ಶಿವ ದೇವನಿಗೆ ಅರ್ಪಣೆ
ಭೊಪಾಲ್: ಕೊಲೆಗಡುಕನೊಬ್ಬ ಜೈಲಿನೊಳಗಡೆ ತನ್ನ ಮರ್ಮಾಂಗವನ್ನು ತಾನೇ ಕತ್ತರಿಸಿಕೊಂಡ ವಿಚಿತ್ರ ಘಟನೆಯೊಂದು ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ.
25 ವರ್ಷದ ಯುವಕ ಕೊಲೆ ಮಾಡಿ ಗ್ವಾಲಿಯಲ್ಲಿರುವ ಕೇಂದ್ರ ಕಾರಾಗ್ರಹಕ್ಕೆ ಸೇರಿದ್ದನು. ಈತ ಮಂಗಳವಾರ ಬೆಳಗ್ಗೆ ಹರಿತವಾದ ಆಯುಧದಿಂದ ತನ್ನ ಮರ್ಮಾಂಗವನ್ನು ತಾನೇ ಕೊಯ್ದುಕೊಂಡಿದ್ದಾನೆ. ನಂತರ ಶಿವ ದೇವನಿಗೆ ಅರ್ಪಣೆ ಮಾಡಿದ್ದಾನೆ.
ಕೊಲೆಗಡುಕನನ್ನು ವಿಷ್ಣು ಸಿಂಗ್ ಎಂದು ಗುರುತಿಸಲಾಗಿದ್ದು, ಈತನಿಗೊಂದು ಕನಸು ಬಿದ್ದಿದ್ದಂತೆ. ಅದೇನೆಂದರೆ, ಸಾಕ್ಷಾತ್ ಶಿವ ದೇವನೇ ಈತನ ಎದುರು ಪ್ರತಕ್ಷನಾಗಿ ನೀನು ನಿನ್ನ ಮರ್ಮಾಂಗವನ್ನು ಕತ್ತರಿಸಿ ನನಗೆ ಅರ್ಪಿಸಬೇಕು ಎಂದು ಕೇಳಿಕೊಂಡಿದ್ದನಂತೆ. ಈ ಹಿನ್ನೆಲೆಯನ್ನು ತಾನು ಈ ರೀತಿ ಮಾಡಿಕೊಂಡಿರುವುದಾಗಿ ಸಿಂಗ್ ತಿಳಿಸಿದ್ದಾನೆ.
ಇತ್ತ ಜೈಲಿನೊಳಗೆ ಬೆಳಗ್ಗೆ 6.30ರ ವೇಳೆಗೆ ಕೈದಿಯೊಬ್ಬ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಜೈಲಿನ ಅಧಿಕಾರಿಗಳು ಗಮನಿಸಿದ್ದಾರೆ. ಅಲ್ಲದೆ ಕೂಡಲೇ ಆತನನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೂಡಲೇ ವೈದ್ಯರು ಶಸ್ತ್ರ ಚಿಕಿತ್ಸೆಯ ಮೂಲಕ ಮರ್ಮಾಂಗವನ್ನು ಮರುಜೋಡಣೆ ಮಾಡಲು ಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಸದ್ಯ ಕೊಲೆಗಡುಕನ ಸ್ಥಿತಿ ಸ್ಥಿರವಾಗಿದೆ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ.
ಈ ಸಂಬಂಧ ಜೈಲಿನ ಜೈಲು ಅಧೀಕ್ಷಕ ಮನೋಜ್ ಪ್ರತಿಕ್ರಿಯಿಸಿ, ವಿಷ್ಣು ಸಿಂಗ್ 2018ರ ಅಕ್ಟೋಬರ್ ತಿಂಗಳಲ್ಲಿ ಕೊಲೆ ಮಾಡಿ ಜೈಲು ಸೇರಿದ್ದಾನೆ. ಈತ ಅವಿವಾಹಿತನಾಗಿದ್ದು, ಜೈಲಿನೊಳಗಡೆ ಹರಿತವಾದ ಆಯುಧವನ್ನು ಬಳಸಿ ತನ್ನ ಮರ್ಮಾಂಗವನ್ನು ಕತ್ತರಿಸಿಕೊಂಡಿದ್ದಾನೆ. ಈ ಮೂಲಕ ಜೈಲಿನ ಆವರಣದಲ್ಲಿರುವ ದೇವಾಲಯದ ದೇವರಿಗೆ ಅರ್ಪಿಸಿದ್ದಾನೆ. ಈ ಬಗ್ಗೆ ತನಿಖೆ ನಡೆಸುವುದಾಗಿ ಅವರು ತಿಳಿಸಿದರು.
ಪೊಲೀಸ್ ಅಧಿಕಾರಿಯೊಬ್ಬರನ್ನು ಕೊಲೆಗೈದು ಜೈಲು ಸೇರಿದ್ದ ಈತ ಮೊದಲು ತನ್ನನ್ನು ಯಾರಾದರೂ ನೋಡುತ್ತಿದ್ದಾರೆಯೇ ಎಂದು ಆ ಕಡೆ ಈ ಕಡೆ ನೋಡಿಕೊಂಡಿದ್ದಾನೆ. ಈ ವೇಳೆ ಯಾರೂ ನೋಡುತ್ತಿಲ್ಲವೆಂಬುದನ್ನು ಅರಿತ ಕೊಲೆಗಡುಕ ಕೂಡಲೇ ಮರ್ಮಾಂಗವನ್ನು ಕತ್ತರಿಸಿಕೊಂಡಿದ್ದಾನೆ ಎಂದು ಕೈದಿಯೊಬ್ಬ ನಡೆದ ಘಟನೆಯನ್ನು ವಿವರಿಸಿದ್ದಾನೆ.