ಕೊಪ್ಪಳ: ಹೋಳಿ ಹಬ್ಬದಂದು ಬಣ್ಣದ ಓಕುಳಿ ಆಡಿ ನಂತರ ನದಿ ಸ್ನಾನಕ್ಕೆ ಹೋದ ಯುವಕ ಜಲಸಮಾಧಿ ಆದ ಘಟನೆ ಕೊಪ್ಪಳ ತಾಲೂಕಿನ ನೇಲಗಿಪುರ ಗ್ರಾಮದಲ್ಲಿ ಭಾನುವಾರ ನಡೆದಿದೆ.
25 ವರ್ಷದ ಬಸವರಾಜ್ ಮ್ಯಾಳಿ ಮೃತ ಯುವಕ. ಭಾನುವಾರದಂದು ಹೋಳಿ ಆಡಿದ ನಂತರ ಬಸವರಾಜ್ ಮತ್ತು ಆತನ ಸ್ನೇಹಿತರು ತುಂಗಭದ್ರಾ ಡ್ಯಾಂನ ಹಿನ್ನೀರಿನಲ್ಲಿ ಸ್ನಾನಕ್ಕೆಂದು ತೆರಳಿದ್ದರು. ಈ ವೇಳೆ ಬಸವರಾಜ್ ಮತ್ತು ಮಾರುತಿ ಎಂಬ ಇಬ್ಬರು ಯುವಕರು ನೀರಿನಲ್ಲಿ ಮುಳುಗಿದ್ದಾರೆ. ನದಿಯ ದಡದಲ್ಲಿದ್ದ ಮೀನುಗಾರರು ಮಾರುತಿಯನ್ನು ರಕ್ಷಣೆ ಮಾಡಿದ್ದಾರೆ. ಆದ್ರೆ ಬಸವರಾಜ್ ಮೃತಪಟ್ಟಿದ್ದಾರೆ.
ಬಸವರಾಜ್ ಮೃತ ದೇಹಕ್ಕಾಗಿ ಸುಮಾರು 30 ಕ್ಕೂ ಹೆಚ್ಚು ನುರಿತ ಈಜುಗಾರರು ಕಾರ್ಯಾಚರಣೆ ಮಾಡಿದ್ದರೂ ಮೃತ ದೇಹ ಇನ್ನೂ ಪತ್ತೆಯಾಗಿಲ್ಲ. ಭಾನುವಾರ ಕತ್ತಲಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಇಂದು ಬೆಳಗ್ಗೆ ಪುನಃ ಕಾರ್ಯಾಚರಣೆ ಆರಂಭಗೊಂಡಿದೆ.
ಸಾಮಾನ್ಯವಾಗಿ ಈ ಭಾಗದ ಯುವಕರು ಹೋಳಿ ನಂತರ ಸ್ನಾನಕ್ಕೆ ನದಿಗೆ ಹೋಗುತ್ತಾರೆ. ಆದ್ರೆ ಈ ಬಾರಿ ನದಿಯಲ್ಲಿ ಹೆಚ್ಚು ಹೂಳಿರುವುದರಿಂದ ಹೊಳಿನಲ್ಲಿ ಬಸವರಾಜ ಮೃತ ದೇಹ ಸಿಕ್ಕಿ ಹಾಕಿಕೊಂಡಿರುವ ಸಾಧ್ಯತೆ ಇದೆ. ಅಳವಂಡಿ ಠಾಣಾ ಪೊಲೀಸರು ಸ್ಥಳದಲ್ಲಿ ಬೀಡು ಬಿಟ್ಟು, ಪರಶೀಲನೆ ನಡೆಸಿದ್ದಾರೆ.