ಶಿವಮೊಗ್ಗ: ಪ್ರೀತಿ ನಿರಾಕರಿಸಿದ್ದಕ್ಕೆ ಯುವಕನೊಬ್ಬ ಯುವತಿ ಬಳಿ ರಾಖಿ ಕಟ್ಟಿಸಿಕೊಳ್ಳುವ ನೆಪದಲ್ಲಿ ಬಂದು ಚಾಕು ಇರಿದ ಘಟನೆ ಶಿವಮೊಗ್ಗ ಜಿಲ್ಲೆ ಸಾಗರದ ಅಣಲೆಕೊಪ್ಪದಲ್ಲಿ ನಡೆದಿದೆ.
ರಾಕೇಶ್ ಚಾಕು ಇರಿದ ಯುವಕ. ರಾಕೇಶ್ ಹೊಸನಗರ ತಾಲೂಕು ಕೆಂಚನಾಳ ಗ್ರಾಮದವನಾಗಿದ್ದು, ಸ್ವಾತಿ(ಹೆಸರು ಬದಲಾಯಿಸಲಾಗಿದೆ) ಎಂಬವಳನ್ನು ಪ್ರೀತಿಸುತ್ತಿದ್ದನು. ಸ್ವಾತಿ ಮನೆ ಸಮೀಪದ ಸಂಬಂಧಿಕರ ಮನೆಯಲ್ಲಿ ರಾಕೇಶ್ ವಾಸಿಸುತ್ತಿದ್ದನು.
ರಾಕೇಶ್, ಸ್ವಾತಿಳನ್ನು ಪದೇ ಪದೇ ಪ್ರೀತಿ ಮಾಡುವಂತೆ ಪೀಡಿಸುತ್ತಿದ್ದನು. ಆದರೆ ಸ್ವಾಮಿ ರಾಕೇಶ್ ಪ್ರೀತಿಯನ್ನು ನಿರಂತರವಾಗಿ ನಿರಾಕರಿಸಿದ್ದಳು. ಇದರಿಂದ ಕೋಪಗೊಂಡ ರಾಕೇಶ್ ಪ್ರೀತ್ಸೋದ್ ಬೇಡ, ಅಣ್ಣ-ತಂಗಿ ಆಗಿರೋಣ, ರಾಖಿ ಕಟ್ಟು ಎಂದು ಸ್ವಾತಿಗೆ ಹೇಳಿದ್ದಾನೆ.
ಸ್ವಾತಿ, ರಾಕೇಶ್ಗೆ ರಾಖಿ ಕಟ್ಟಲು ಒಪ್ಪಿಕೊಂಡಳು. ಇಂದು ರಾಕೇಶ್ ರಾಖಿ ಕಟ್ಟಿಸಿಕೊಳ್ಳಲು ಸ್ವಾತಿಯ ಮನೆ ಹೊರಗಡೆ ನಿಂತಿದ್ದನು. ಬಳಿಕ ಸ್ವಾತಿ ರಾಖಿ ಕಟ್ಟುವ ವೇಳೆ ರಾಕೇಶ್ ಚಾಕುವಿನಿಂದ ಆಕೆಯ ಕೆನ್ನೆಗೆ ಕೊಯ್ದು ಪರಾರಿ ಆಗಿದ್ದಾನೆ.
ಚಾಕು ಇರಿತದಿಂದ ಗಾಯಗೊಂಡಿರುವ ಯುವತಿ ಸ್ವಾತಿಳನ್ನು ಸಾಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.