ಬೆಂಗಳೂರು: ಬೈಕ್ ಗೆ ಹೆಚ್ಚು ಸದ್ದು ಬರುವಂತಹ ಸೈಲೆನ್ಸರ್ ಹಾಕಿಕೊಂಡಿದ್ದ ಯುವಕರನ್ನು ಗ್ರಾಮಸ್ಥರು ಪ್ರಶ್ನಿಸಿದ್ದಕ್ಕೆ ಅಕ್ರೋಶಗೊಂಡ ಯುವಕ ತನ್ನ ಸ್ನೇಹಿತರನ್ನು ಕರೆತಂದು ದಾಂಧಲೆ ನಡೆಸಲು ಹೋಗಿ ಗ್ರಾಮಸ್ಥರಿಂದ ಹಿಗ್ಗಾಮುಗ್ಗ ಥಳಿಸಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ಬೆಟ್ಟೆನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಯಲಹಂಕದ ಶೇಷಾದ್ರಿಪುರಂ ಕಾಲೇಜಿನಲ್ಲಿ ಓದುತ್ತಿದ್ದವರುವ ಹರೀಶ್ ಮತ್ತು ಹೇಮಂತ್ ಎಂಬ ಯುವಕರು ತಮ್ಮ ಬೈಕ್ ಗೆ ಹೆಚ್ಚು ಶಬ್ದ ಬರುವ ಸೈಲೆನ್ಸರ್ ಅಳವಡಿಸಿಕೊಂಡು ಬಂದು ಗ್ರಾಮದಲ್ಲಿ ಸುತ್ತಾಡುವಾಗ ಗ್ರಾಮಸ್ಥರು ಬೈದು ಕಳುಹಿಸಿದ್ದರು. ಇದ್ರಿಂದ ಅಕ್ರೋಶಗೊಂಡ ಹರೀಶ್ ಹಾಗೂ ಹೇಮಂತ್, ತಮ್ಮ ಕಾಲೇಜಿನ 20 ಯುವಕರೊಂದಿಗೆ ಬೆಟ್ಟೇನಹಳ್ಳಿ ಗ್ರಾಮಕ್ಕೆ ತೆರಳಿ ವಿಕೆಟ್, ಬ್ಯಾಟ್, ಲಾಂಗ್ ತೆಗೆದುಕೊಂಡು ಗಲಾಟೆ ಮಾಡಲು ಮುಂದಾಗಿದ್ದರು.
ಈ ವೇಳೆ ಗ್ರಾಮಸ್ಥರು ಇಬ್ಬರು ಯುವಕರನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ. ಈ ಸಂಬಂಧ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹರೀಶ್ ಮತ್ತು ಹೇಮಂತ್ ನ ತಂದೆ ಹಾಗೂ ಅಜ್ಜನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.