ಮಂಡ್ಯ: ತನ್ನ ಹುಟ್ಟುಹಬ್ಬದಂದೇ ಯುವಕನೊಬ್ಬ ಕಾವೇರಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಮನಕಲಕುವ ಘಟನೆ ಮಂಡ್ಯ ಜಿಲ್ಲೆ, ಮಳವಳ್ಳಿ ತಾಲೂಕಿನ ಮುತ್ತತ್ತಿಯಲ್ಲಿ ನಡೆದಿದೆ.
ರಾಮನಗರ ಮೂಲದ 20 ವರ್ಷದ ಯುವಕ ಮಹೇಶ್ ಮೃತ ದುರ್ದೈವಿ. ಬೆಂಗಳೂರಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಮಹೇಶ್ ತನ್ನ ಹುಟ್ಟುಹಬ್ಬ ಆಚರಿಸಲು 12 ಜನ ಗೆಳೆಯರೊಂದಿಗೆ ಶುಕ್ರವಾರದಂದು ಮುತ್ತತ್ತಿಗೆ ಬಂದಿದ್ದರು. ಮೊದಲು ಮಹೇಶ್ ತನ್ನ ಗೆಳೆಯರೊಂದಿಗೆ ಸೇರಿ ಕಾವೇರಿ ನದಿ ದಂಡೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಆನಂತರ ಗೆಳೆಯರೆಲ್ಲ ಈಜಲು ಕಾವೇರಿ ನದಿಗೆ ಇಳಿದಿದ್ದಾರೆ. ಆದರೆ ಈಜಲು ನದಿಗೆ ಇಳಿದ ಮಹೇಶ್ ತನ್ನ ಹುಟ್ಟುಹಬ್ಬದ ದಿನದಂದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ವಿಧಿಯಾಟಕ್ಕೆ ಮಹೇಶ್ ಪೋಷಕರು ಮತ್ತು ಗೆಳೆಯರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.