ಬೆಂಗಳೂರು: ಕಸ ಎಸೆದ ಯುವಕನನ್ನು ಬಿಲ್ಡಿಂಗ್ ಮೇಲಿನಿಂದ ತಳ್ಳಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಜಿಲ್ಲೆಯ ಹನುಮಂತನಗರ ಬಳಿಯ ಪಿಇಎಸ್ ಕಾಲೇಜ್ ಬಳಿ ನೆಡೆದಿದೆ.
ತುಮಕೂರು ಮೂಲದ ದೇವರಾಜ್ 29 ಮೃತ ಯುವಕ. ಮೃತ ದೇವರಾಜ್ ಶುಕ್ರವಾರ ರಾತ್ರಿ ಮನೆಯಲ್ಲಿ ಊಟ ಮುಗಿಸಿ ನಂತರ ಮನೆ ಮೇಲಿನಿಂದ ಕಸದ ಕವರನ್ನು ಕೆಳಕ್ಕೆ ಎಸೆದಿದ್ದಾನೆ. ಈ ಸಂದರ್ಭದಲ್ಲಿ ದೇವರಾಜ್ ಮನೆಯ ಮುಂದೆ ರಸ್ತೆಯಲ್ಲಿ ನಿಂತಿದ್ದ ಮೂವರು ಯುವಕರು ಕಸ ಎಸೆದಿದ್ದನ್ನು ನೋಡಿ ಪ್ರಶ್ನೆ ಮಾಡಿದ್ದಾರೆ.
ಅಲ್ಲದೇ ಮೂವರು ಯುವಕರು ದೇವರಾಜ್ ಮನೆಗೆ ತೆರಳಿ ಗಲಾಟೆ ಮಾಡಿದ್ದಾರೆ. ಕಸ ವಿಚಾರವಾಗಿ ಗಲಾಟೆ ತಾರಕಕ್ಕೇರಿ ಯುವಕರು ದೇವರಾಜ್ ನನ್ನು ಬಿಲ್ಡಿಂಗ್ ಮೇಲಿನಿಂದ ತಳ್ಳಿ ಪರಾರಿಯಾಗಿದ್ದಾರೆ. ಇತ್ತ ಬಿಲ್ಡಿಂಗ್ ಮೇಲಿನಿಂದ ಬಿದ್ದ ದೇವರಾಜು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಈ ಘಟನೆ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.