ದಾವಣಗೆರೆ: ದೇವಸ್ಥಾನದ ಕಲ್ಯಾಣಿಯಲ್ಲಿ ಮುಳುಗಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಕೊಡದ ಗುಡ್ಡ ಗ್ರಾಮದಲ್ಲಿ ನಡೆದಿದೆ.
ರಕ್ಷಿತ್(18) ಮೃತ ದುರ್ದೈವಿ. ಯುವಕನನ್ನು ಚಿತ್ರದುರ್ಗ ತಾಲೂಕಿನ ಅರಳಿಕಟ್ಟೆ ಗ್ರಾಮದವನು ಎಂದು ಗುರುತಿಸಲಾಗಿದೆ.
ಶುಕ್ರವಾರ ವೀರಭದ್ರ ದೇವರ ಜಾತ್ರೆ ನಡೆಯುತ್ತಿತ್ತು. ರಕ್ಷಿತ್ ಜಾತ್ರೆಗೆಂದು ತನ್ನೋರಿನಿಂದ ಬಂದಿದ್ದನು. ಶುಕ್ರವಾರ ಜಾತ್ರೆ ಮುಗಿಸಿ ಶನಿವಾರ ಮಧ್ಯಾಹ್ನ ಪೂಜೆಗೆಂದು ಸ್ನಾನ ಮಾಡಲು ದೇವಸ್ಥಾನದ ಕಲ್ಯಾಣಿಗೆ ಹೋಗಿದ್ದಾನೆ. ಈ ಸಂದರ್ಭದಲ್ಲಿ ಕಲ್ಯಾಣಿ ಆಳ ಇದ್ದುದರಿಂದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಇತ್ತ ಸ್ನಾನಕ್ಕೆ ಹೋದ ಯುವಕ ಹಿಂದಿರುಗಿ ಬಾರದಿದ್ದರಿಂದ ಆತಂಕಗೊಂಡ ಆತನ ಪೋಷಕರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಕೂಡಲೇ ಪೊಲೀಸರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಯುವಕನ ಮೃತ ದೇಹಕ್ಕಾಗಿ ಕಾರ್ಯಚರಣೆ ನಡೆಸುತ್ತಿದ್ದಾರೆ.
ಈ ಘಟನೆ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂದು ಕೂಡ ಕಾರ್ಯಾಚರಣೆ ನಡೆಯುತ್ತಿದ್ದು, ಮೃತ ದೇಹ ಇನ್ನೂ ಪತ್ತೆಯಾಗಿಲ್ಲ.