ಹಾಸನ: ಐಪಿಎಲ್ ಪಂದ್ಯಕ್ಕೆ ಬೆಟ್ಟಿಂಗ್ ಕಟ್ಟಿ ಹಣ ತೀರಿಸಲಾಗದೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಇಂದು ಮೃತಪಟ್ಟ ಘಟನೆ ಆಲೂರು ತಾಲೂಕಿನ ಬದುಕರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಲತೇಶ್ ಕುಮಾರ್ (25) ಮೃತ ಯುವಕ. ಲತೇಶ್ ಕುಮಾರ್ ಹಾಸನದ ರಾಜೀವ್ ಕಾಲೇಜಿನಲ್ಲಿ ಡಿಪ್ಲೋಮಾ ವಿದ್ಯಾಭ್ಯಾಸ ಮಾಡುತ್ತಿದ್ದನು. ಲತೇಶ್ ಐಪಿಎಲ್ ಬೆಟ್ಟಿಂಗ್ ಕಟ್ಟಿ ಹಣ ಕಳೆದುಕೊಂಡಿದ್ದನು. ಬಳಿಕ ಸ್ನೇಹಿತರ ಕಿರುಕುಳ ತಾಳಲಾರದೇ ಮೂರು ದಿನಗಳ ಹಿಂದೆ ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದನು.
ವಿಷ ಕುಡಿದು ಏಕೆ ಆತ್ಮಹತ್ಯೆಗೆ ಯತ್ನಿಸಿದೆ ಎಂದು ಲತೇಶ್ನನ್ನು ಪೋಷಕರು ಪ್ರಶ್ನಿಸಿದ್ದಾರೆ. ಆಗ ಲತೇಶ್ ಐಪಿಎಲ್ ಬೆಟ್ಟಿಂಗ್ ಮಾಡುತ್ತಿದ್ದೆ ಎಂದು ಹೇಳಿದ್ದಾರೆ. ಅಲ್ಲದೆ ಐಪಿಎಲ್ ಬೆಟ್ಟಿಂಗ್ ಕಟ್ಟಿ ಹಣ ಕಳೆದುಕೊಂಡಿದ್ದೇನೆ. ಹಣ ನೀಡು ಎಂದು ಕಿರುಕುಳ ನೀಡುತ್ತಿದ್ದರು. ಹಾಗಾಗಿ ವಿಷ ಸೇವಿಸಿದ್ದೇನೆ ಎಂದು ಪೋಷಕರ ಬಳಿ ಹೇಳಿಕೊಂಡಿದ್ದನು.
ಲತೇಶ್ ಕಳೆದ ಒಂದು ತಿಂಗಳಿನಿಂದ ಪ್ರತಿ ಪಂದ್ಯದ ಮೇಲೂ ಬೆಟ್ಟಿಂಗ್ ಕಟ್ಟುತ್ತಿದ್ದ. ಆದರೆ ಪ್ರತಿ ಪಂದ್ಯದಲ್ಲೂ ಲತೇಶ್ ಸೋತು ಹಣ ಕಳೆದುಕೊಳ್ಳುತ್ತಿದ್ದನು.
ಬೆಟ್ಟಿಂಗ್ ನಲ್ಲಿ ಸೋತ ಲತೇಶ್ ಕುಮಾರ್ಗೆ ಹಣ ನೀಡು ಎಂದು ಅನಿಲ್ ಹಾಗೂ ಗಣೇಶ್ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತ ಲತೇಶ್ ಮೂರು ದಿನಗಳ ಹಿಂದೆ ವಿಷ ಸೇವಿಸಿದ್ದ. ಆದರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಲತೇಶ್ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಈ ಬಗ್ಗೆ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.