ಮಂಡ್ಯ: ಪ್ರಿಯತಮೆಯನ್ನು ಆಕೆಯ ಪೋಷಕರು ತನ್ನಿಂದ ದೂರ ಮಾಡಿದ್ದಾರೆಂದು ಮನನೊಂದು ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಮಂಡ್ಯದ ಕೆಆರ್ ಪೇಟೆ ತಾಲೂಕಿನ ನಾಯಿಸಿಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ನಿಂಗೇಗೌಡರ ಮಗ ಮಹೇಶ್(37) ಆತ್ಮಹತ್ಯೆಗೆ ಶರಣಾದ ಯುವಕ. ಮಹೇಶ್ ಕಳೆದ ಮೂರು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಈ ವಿಚಾರ ಯುವತಿಯ ಪೋಷಕರಿಗೆ ತಿಳಿದ ಬಳಿಕ ಅವರು ತಮ್ಮ ಮಗಳ ಜೊತೆ ಮಾತುಕತೆ ನಡೆಸದಂತೆ ಎಚ್ಚರಿಕೆ ನೀಡಿದ್ದರು. ಅಲ್ಲದೇ ಯುವತಿಯನ್ನು ಆಕೆಯ ಪೋಷಕರು ಸಂಬಂಧಿಕರ ಮನೆಯಲ್ಲಿ ಬಿಟ್ಟಿದ್ದರು. ಇಬ್ಬರು ಪರಸ್ಪರ ಸಿಗದಂತೆ ದೂರ ಮಾಡಿದ್ದರು. ಇದರಿಂದ ಮನನೊಂದ ಮಹೇಶ್ ತಮ್ಮ ಜಮೀನಿನ ಬಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ವಿಚಾರವನ್ನು ಯುವಕ ತನ್ನ ಡೈರಿಯಲ್ಲಿ ಬರೆದುಕೊಂಡಿದ್ದು, ಆ ಡೈರಿಯನ್ನು ತನ್ನ ಹೊಟ್ಟೆಗೆ ಸಿಕ್ಕಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಪ್ರೇಯಸಿಯ ಪೋಷಕರ ಜೀವ ಬೆದರಿಕೆಯ ಭಯದಿಂದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಆತನ ಪೋಷಕರು ಆರೋಪಿಸುತ್ತಿದ್ದಾರೆ.
ಕೆಆರ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.