ಬೆಂಗಳೂರು: ಫೈನಾನ್ಸಿಯರ್ ಕಿರುಕುಳ ಹಾಗೂ ಪ್ರೀತಿ ಸಿಗದಿದ್ದಕ್ಕೆ ಯುವಕನೊಬ್ಬ ಸೆಲ್ಫಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಕುರುಬರಹಳ್ಳಿಯಲ್ಲಿ ನಡೆದಿದೆ
26 ವರ್ಷದ ರಾಜೇಶ್ ನೇಣಿಗೆ ಶರಣಾದ ಯುವಕ. ಕಿರಣ್ ಅನ್ನೋರ ಬಳಿ ಸುಮಾರು 25 ಸಾವಿರ ರೂ. ಸಾಲ ಪಡೆದಿದ್ದರು. ಸಾಲವನ್ನು ಹಿಂದಿರುಗಿಸುವಂತೆ ಫೈನಾನ್ಸಿಯರ್ ಕಿರುಕುಳ ನೀಡುತ್ತಿದ್ದ. ಇದರಿಂದ ಮನನೊಂದು ರಾಜೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಸೆಲ್ಫಿ ವಿಡಿಯೋದಲ್ಲೇನಿದೆ?: ಸಾಲ ಮಾಡಿರುವುದು ನಾನು. ಹೀಗಾಗಿ ನನ್ನ ಕುಟುಂಬದವರಿಗೆ ಯಾರೂ ತೊಂದರೆ ಕೊಡಬೇಡಿ ಎಂದು ಹೇಳಿರೋ ರಾಜೇಶ್, ಯಾರೂ ಸಾಲ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ತುಂಬಾ ನೋವು ಕೊಟ್ಬಿಟ್ಟೆ ಕಣೇ, ನಿನ್ನ ನಂಬಿದೆ. ನಿನಗೋಸ್ಕರ ಹೇಳಿದ್ದೆಲ್ಲಾ ಮಾಡಿದ್ದೆ. ನನ್ನ ಜೊತೆಯೇ ಇರುತ್ತೇನೆ ಎಂದು ಮಾತು ಕೊಟ್ಟೆ. ಆದರೆ ನೀನು ಮೋಸ ಮಾಡಿಬಿಟ್ಟೆ. ಐ ಲವ್ ಯು ರಾ.. ಎಂದು ಹುಡುಗಿಯೊಬ್ಬಳ ಬಗ್ಗೆ ಮಾತನಾಡಿದ್ದಾರೆ. ರಾಜೇಶ್ ಮದುವೆಯಾಗಿದ್ದ ಯುವತಿಯೊಬ್ಬರನ್ನ ಪ್ರೀತಿಸುತ್ತಿದ್ದರು ಎಂದು ಹೇಳಲಾಗಿದೆ.
ಅಮ್ಮ ಸಾರಿ, ಐ ಲವ್ ಯು ಅಮ್ಮ. ಸಾರಿ ಗುಡ್ ಬೈ ಎಂದು ಹೇಳಿದ್ದಾರೆ. ಸಾಲ ಪಡೆದಿದ್ದು ನಾನು ಡಾಕ್ಯೂಮೆಂಟ್ಗೆ ಸಹಿ ಹಾಕಿರೋದು ನಾನು. ನನ್ನ ಕುಟುಂಬಕ್ಕೆ ಏನು ಮಾಡಬೇಡಿ ಎಂದು ಹೇಳಿ ಸ್ನೇಹಿತರಿಗೆಲ್ಲಾ ಸಾರಿ ಕೇಳಿದ್ದಾರೆ.
ರಾಜೇಶ್ ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದರು ಎನ್ನಲಾಗಿದೆ. ಈ ಬಗ್ಗೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.