ವಿಜಯಪುರ: ಮಳೆಗಾಗಿ ಯುವಕನೊಬ್ಬ ಮುಳ್ಳಿನ ಮರ(ಜಾಲಿ ಮರ) ಏರಿ ದೇವರಲ್ಲಿ ಮೊರೆಯಿಟ್ಟಿರುವ ವಿಚಿತ್ರ ಘಟನೆ ಜಿಲ್ಲೆಯ ಬಾಬಾನಗರ ಗ್ರಾಮದಲ್ಲಿ ನಡೆದಿದೆ.
ಸುರೇಶ್ ಮಹಾರಾಜ್ ಮುಳ್ಳಿನ ಮರ ಏರಿ ಕುಳಿತ ಯುವಕ. ಗ್ರಾಮದ ಶ್ರೀ ನಗರ ಸಿದ್ದೇಶ್ವರ ದೇವಸ್ಥಾನ ಹಿಂದುಗಡೆಯಿರುವ ಮುಳ್ಳಿನ ಮರವನ್ನು ಸುರೇಶ್ ಹತ್ತಿದ್ದು, ಗ್ರಾಮದ ಜನರು ಮರದ ಹತ್ತಿರ ಪ್ರಾರ್ಥನೆ ಮತ್ತು ಭಜನೆ ಪ್ರಾರಂಭಿಸಿದ್ದಾರೆ. ಸುರೇಶ್ ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜಂಬಗಿ ಗ್ರಾಮದವನಾಗಿದ್ದು, ಕುರಿ ಕಾಯುತ್ತಾ ಬಂದು ಈ ರೀತಿ ಮಳೆಗಾಗಿ ಮರವೇರಿ ಕುಳಿತಿದ್ದಾನೆ ಎನ್ನಲಾಗುತ್ತಿದೆ.
ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದ ಜನರಿಗಾಗಿ ಅನ್ನಪ್ರಸಾದ ವ್ಯವಸ್ಥೆಯನ್ನು ಮಾಡಿದ್ದಾರೆ. ವಿಷಯ ತಿಳಿದ ಸುತ್ತಮುತ್ತಲಿನ ಕಳ್ಳಕವಟಗಿ, ಬಿಜ್ಜರಗಿ, ಘೋಣಸಗಿ ಗ್ರಾಮದ ಜನರು ತಂಡೋಪತಂಡವಾಗಿ ಯುವಕ ಸುರೇಶ್ನನ್ನು ನೋಡಲು ಆಗಮಿಸುತ್ತಿದ್ದಾರೆ.