ನೆಲಮಂಗಲ: ಯುವಕನೊಬ್ಬ ಟೋಲ್ ಹಾಗೂ ಬಸ್ ಮಧ್ಯೆ ಸಿಲುಕಿ ದಾರುಣವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲದ ಪಾರ್ಲೆ ಜೀ ನವಯುಗ ಟೋಲ್ನಲ್ಲಿ ನಡೆದಿದೆ.
ದರ್ಶನ್ ಮೃತ ಯುವಕ. ದರ್ಶನ್ ರಾತ್ರಿ ಪಾಳಯದಲ್ಲಿ ಕೆಲಸ ಮಾಡುತ್ತಿದ್ದನು. ಬುಧವಾರ ರಾತ್ರಿ ದರ್ಶನ್ ಟೋಲ್ ಸಂಗ್ರಹ ಮಾಡುವ ಬಳಿ ನಿಂತಿದ್ದನು. ಈ ವೇಳೆ ಏಕಾಏಕಿ ಖಾಸಗಿ ಬಸ್ ಬಂದಿದೆ. ಆಗ ದರ್ಶನ್ ಬಸ್ ಹಾಗೂ ಟೋಲ್ ಡಬ್ಬದ ಗೋಡೆ ಮಧ್ಯೆ ಸಿಲುಕಿದ್ದಾನೆ. ಬಸ್ ಮುಂದಕ್ಕೆ ಚಲಿಸಿದಂತೆ ಯುವಕ ಕೂಡ ಗೋಡೆ ಹಾಗೂ ಬಸ್ ಮಧ್ಯೆ ಸಿಲುಕಿ ಸುರುಳಿಯಾಕಾರವಾಗಿ ಸುತ್ತಿ ದಾರುಣವಾಗಿ ಸಾವನ್ನಪ್ಪಿದ್ದಾನೆ.
ಮೃತ ದರ್ಶನ್ ನೆಲಮಂಗಲ ಪಟ್ಟಣದ ಪಟೇಲ್ ಚನ್ನಪ್ಪ ಬಡಾವಣೆಯ ನಿವಾಸಿಯಾಗಿದ್ದು, ಕಳೆದ 23 ದಿನಗಳ ಹಿಂದೆ ಟೋಲ್ನಲ್ಲಿ ಕೆಲಸಕ್ಕೆ ಸೇರಿದ್ದ ಎನ್ನಲಾಗಿದೆ. ಈತನ ಭಯಾನಕ ಸಾವಿನ ದೃಶ್ಯಗಳು ಟೋಲ್ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಖಾಸಗಿ ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.