ತುಮಕೂರು: ಗೋವಾದ ಕಲ್ಲೊಂಗೋಟ್ ಬೀಚಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ತುಮಕೂರಿನ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ತುಮಕೂರು ಬೆಳಗುಂಬ ಗ್ರಾಮದ ವಡ್ಡರಹಳ್ಳಿ ನಿವಾಸಿ ವೆಂಕಟೇಶ್ (20) ಮೃತ ಯುವಕ. ಕಳೆದ ಶುಕ್ರವಾರದಂದು ತಾಯಿ ಜೊತೆ ಜಗಳಮಾಡಿಕೊಂಡು ಮನೆ ಬಿಟ್ಟು ನೇರವಾಗಿ ಗೋವಾಕ್ಕೆ ಹೋಗಿದ್ದನು. ಅಲ್ಲಿ ಶನಿವಾರ ಸಂಜೆ ಕಲ್ಲೊಂಗೋಟ್ ಬೀಚಲ್ಲಿ ಕೆಲ ಕಾಲ ಓಡಾಡಿ ನಂತರ ರಾತ್ರಿಯಾಗುತಿದ್ದಂತೆ ಜನರ ಸಂಚಾರ ಕಡಿಮೆಯಾದಾಗ ವೆಂಕಟೇಶ್ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪಿಯುಸಿ ಓದಿದ್ದ ವೆಂಕಟೇಶ್ ಬೆಂಗಳೂರಿನಲ್ಲಿ ದ್ವಿಚಕ್ರ ವಾಹನ ಶೋ ರೂಮ್ವೊಂದರಲ್ಲಿ ಸೆಲ್ಸ್ ಮ್ಯಾನ್ ಆಗಿ ಕೆಲಸ ಮಾಡುತಿದ್ದ ಎನ್ನಲಾಗಿದೆ. ಕ್ಷುಲಕ ಕಾರಣಕ್ಕೆ ಮನೆಯಲ್ಲಿ ಜಗಳ ನಡೆದಿದೆ. ಇದರಿಂದಲೇ ಮೃತ ವೆಂಕಟೇಶ್ ಮನೆ ಬಿಟ್ಟು ಹೋಗಿದ್ದನು. ಸದ್ಯಕ್ಕೆ ಆತ್ಮಹತ್ಯೆ ವಿಷಯ ತಿಳಿದು ಕುಟುಂಬದವರು ಗೋವಾಕ್ಕೆ ಹೋಗಿದ್ದು, ಮೃತದೇಹವನ್ನು ತಮ್ಮ ಗ್ರಾಮಕ್ಕೆ ತರುತ್ತಿದ್ದಾರೆ.