ಹೈದರಾಬಾದ್: ಪ್ರೀತಿ ನಿರಾಕರಿಸಿದಕ್ಕೆ ಯುವಕನೊಬ್ಬ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ತೆಲಂಗಾಣದ ಯಾದಾದ್ರಿ ಜಿಲ್ಲೆಯ ಅತ್ಮಕುರ್ ಮಂದಲ್ನಲ್ಲಿ ನಡೆದಿದೆ.
ಕಿರಣ್ ಕುಮಾರ್ ಗವಡ್(25) ಆತ್ಮಹತ್ಯೆ ಮಾಡಿಕೊಂಡ ಯುವಕ. ಕಿರಣ್ ಕುಮಾರ್ ಮೂಲತಃ ಅರೇಪಲ್ಲಿ ಜಿಲ್ಲೆಯವನಾಗಿದ್ದು, ಹೈದರಾಬಾದ್ನ ಮೆದಿಪಟ್ನಂನ ಕನ್ ಸ್ಟ್ರಕ್ಷನ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು.
ಕಿರಣ್ ತನ್ನದೇ ಗ್ರಾಮದ ಯುವತಿಯನ್ನು ನಾಲ್ಕು ವರ್ಷದಿಂದ ಪ್ರೀತಿಸುತ್ತಿದ್ದನು. ಆದರೆ ಯುವತಿ ಕಿರಣ್ ಪ್ರೀತಿಯನ್ನು ನಿರಾಕರಿಸಿದ್ದಾಳೆ. ಇದರಿಂದ ಖಿನ್ನತೆಕ್ಕೊಳಗಾದ ಕಿರಣ್ ತನ್ನ ಸಾವಿಗೆ ಕಾರಣವನ್ನು ಡೆತ್ನೋಟ್ನಲ್ಲಿ ಬರೆದಿದ್ದ. ಅಲ್ಲದೆ ಆಡಿಯೋವನ್ನು ರೆಕಾರ್ಡ್ ಮಾಡಿ ಯೂಟ್ಯೂಬ್ ಹಾಗೂ ವಾಟ್ಸಾಪ್ ಗ್ರೂಪಿನಲ್ಲಿ ಕಳುಹಿಸಿದ್ದನು.
ಕಿರಣ್ ಬೆಳಗಿನ ಜಾವ ಸುಮಾರು 2.25ಕ್ಕೆ ಶ್ರೀರಾಮನಗರ ರೈಲ್ವೆ ಸ್ಟೇಷನ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳೀಯರು ಆತನ ಮೃತದೇಹ ನೋಡಿ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಿರಣ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.