– ಹೆತ್ತವರ ಬಳಿ ಹೊರಟಿದ್ದಕ್ಕೆ ಸಾಕು ತಾಯಿಯ ಕಣ್ಣೀರು
ಅಮರಾವತಿ: 12 ವರ್ಷಗಳಿಂದ ಕಾಣೆಯಾಗಿದ್ದ ಯುವತಿ ಫೇಸ್ಬುಕ್ ಮೂಲಕ ತಮ್ಮ ಕುಟುಂಬವನ್ನು ಸೇರಿರುವ ಆಶ್ಚರ್ಯಕರ ಘಟನೆ ನಡೆದಿದೆ.
ಭವಾನಿ ಫೇಸ್ಬುಕ್ ಮೂಲಕ ಪೋಷಕರನ್ನು ಸೇರಿದ ಯುವತಿ. ವಂಶಿಕೃಷ್ಣ ಎಂಬವರ ಮನೆಯಲ್ಲಿ ಭವಾನಿ ಮನೆ ಕೆಲಸ ಮಾಡುತ್ತಿದ್ದಳು ಎಂದು ವಿಚಾರಣೆ ವೇಳೆ ವಿವರಿಸಿದ್ದಾಳೆ. ನಾಲ್ಕು ವರ್ಷದವಳಿರುವಾಗ ಆಂಧ್ರ ಪ್ರದೇಶದ ವಿಜಯನಗರಂ ಜಿಲ್ಲೆಯ ಚೀಪುರುಪಲ್ಲಿಯಲ್ಲಿ ನನ್ನ ಪೋಷಕರಿಂದ ಬೇರ್ಪಟ್ಟಿದ್ದೆ ಎಂದು ತಿಳಿಸಿದ್ದಾಳೆ.
ಬೇರ್ಪಟ್ಟ ನಂತರ ವಿಜಯವಾಡದ ಜಯಾ ಎಂಬವರು ಭವಾನಿಯನ್ನು ಸಾಕುತ್ತಿದ್ದು, ಅವರ ಜೊತೆಯೇ ವಿಜಯವಾಡದಲ್ಲಿ ವಾಸಿಸುತ್ತಿದ್ದಳು. ಇದೀಗ ಪೋಷಕರನ್ನು ಸೇರಿದ್ದು, ನನ್ನ ಪೋಷಕರೊಂದಿಗೆ ಮನೆಗೆ ತೆರಳಲು ನನಗೆ ತುಂಬಾ ಸಂತೋಷವಾಗುತ್ತಿದೆ ಎಂದು ಭವಾನಿ ತಿಳಿಸಿದ್ದಾಳೆ.
ದಾಖಲೆಗಳ ಆಧಾರದ ಮೇಲೆ ಆಕೆಯ ಕುಟುಂಬಸ್ಥರನ್ನು ಹುಡುಕಲು ಪ್ರಯತ್ನಿಸಿದೆ. ಅಲ್ಲದೆ ಅವಳ ವಯಸ್ಸನ್ನು ತಿಳಿಯಲು ದಾಖಲೆಗಳನ್ನು ನೀಡುವಂತೆ ಭವಾನಿಗೆ ಕೇಳಿದೆ. ಆದರೆ ನನ್ನ ಬಳಿ ಯಾವುದೇ ದಾಖಲೆಗಳಿಲ್ಲ ನನ್ನ ಕುಟುಂಬದಿಂದ ದೂರವಾದ ನಂತರ ಮಹಿಳೆಯೊಬ್ಬರ ಬಳಿ ವಾಸವಾಗಿದ್ದೇನೆ ಎಂದಳು. ಹೇಗೆ ನಿಮ್ಮ ಪೋಷಕರನ್ನು ಹುಡುಕುವುದು ಎಂದು ಅವಳನ್ನು ಕೇಳಿದೆ. ನಂತರ ಭವಾನಿ ಮಾಹಿತಿ ನೀಡಿದಳು, ಫೇಸ್ಬುಕಿನಲ್ಲಿ ಹುಡುಕಲು ಪ್ರಾರಂಭಿಸಿದೆ ಎಂದು ವಂಶಿ ಅವರು ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
ಭವಾನಿ ನೀಡಿದ ಮಾಹಿತಿ ಆಧಾರದ ಮೇಲೆ ಫೇಸ್ ಬುಕ್ನಲ್ಲಿ ನಾನು ಕೆಲವರಿಗೆ ಸಂದೇಶ ಕಳುಹಿಸಿದೆ. ನಂತರ ಒಬ್ಬರು ಮರಳಿ ಸಂದೇಶ ಕಳುಹಿಸುವ ಮೂಲಕ ಪ್ರತಿಕ್ರಿಯೆ ನೀಡಿದರು. ನಂತರ ಅವರ ವಿವರವನ್ನು ನೋಡಿದೆ. ಹುಡುಗಿ ನೀಡಿದ ಮಾಹಿತಿಗೆ ಅದು ಹೊಂದಿತು. ನಂತರ ಅವರು ವಿಡಿಯೋ ಕಾಲ್ ಮಾಡಲು ಬಯಸಿದರು. ಭವಾನಿ ವಿಡಿಯೋ ಕಾಲ್ ಮೂಲಕ ತನ್ನ ಕುಟುಂಬದವರೊಂದಿಗೆ ಮಾತನಾಡಿದಳು. ಆಗ ಕುಟುಂಬದ ಕುರಿತು ಮಾಹಿತಿ ತಿಳಿಯಿತು ಎಂದು ವಂಶಿ ತಿಳಿಸಿದ್ದಾರೆ. ಭವಾನಿ ತನ್ನ ಪೋಷಕರೊಂದಿಗೆ ಹೋಗುವುದನ್ನು ಕಂಡು ಸಾಕು ತಾಯಿ ಜಯಾ ಪ್ರಾರಂಭದಲ್ಲಿ ಬೇಸರಗೊಂಡರು. ಆದರೆ ನಂತರ ಅವಳ ನಿರ್ಧಾರದಿಂದ ಸಂತಸಗೊಂಡರು.