– ಪರಿಶ್ರಮ ಒಂದೇ ಸಾಧನೆಯ ಮುಖ್ಯ ಅಸ್ತ್ರ
ಚಿಕ್ಕೋಡಿ/ಬೆಳಗಾವಿ: ರೈತರಿಗೆ ಸರ್ಕಾರ ಸಾಲಮನ್ನಾ ಮಾಡುವುದು ಬೇಡ, ಆಫೀಸ್ಗೆ ಹೋದರೆ ರೈತರನ್ನ ಕೂರಿಸಿ ಏನಪ್ಪ ಅಂತ ಕೇಳುವಂತ ಅಧಿಕಾರಿ ಬೇಕು ಎಂದು ಯುವ ವಿಜ್ಞಾನಿ ಡ್ರೋಣ್ ಪ್ರತಾಪ್ ಹೇಳಿದರು.
ಜಿಲ್ಲೆಯ ನದಿ ಇಂಗಳಗಾಂವದಲ್ಲಿ ನಡೆದ ಅದಮ್ಯ ಫೌಂಡೇಶನ್ ವತಿಯಿಂದ ಅದಮ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ವಿಶೇಷ ಆಹ್ವಾನಿತರಾಗಿ ಯುವ ವಿಜ್ಞಾನಿ ಡ್ರೋಣ್ ಪ್ರತಾಪ್ ಆಗಮಿಸಿದ್ದರು. ಈ ವೇಳೆ ಮಾತನಾಡಿ, ಮೊಬೈಲ್ಗಳ ಮಿತವಾದ ಬಳಕೆಯ ಜೊತೆಗೆ ತಂತ್ರಜ್ಞಾನದ ಅರಿವು ಇರಬೇಕು. ಸತತವಾದ ಪರಿಶ್ರಮ ಇದ್ದರೆ ಮಾತ್ರ ಜೀವನದಲ್ಲಿ ಯಶಸ್ಸು ಬರುತ್ತದೆ ಎಂದರು.
ನಮ್ಮ ದೇಶದಲ್ಲಿ ರೈತನಿಗೆ ಸರ್ಕಾರ ಮಾಡುವ ಸಾಲಮನ್ನಾ ಬೇಡ. ಅವರು ಒಂದು ಕಚೇರಿಗೆ ಹೋದರೆ ಕೂರಿಸಿ ಏನಪ್ಪ ಅಂತ ಕೇಳುವಂತ ಅಧಿಕಾರಿ ಬೇಕು. ನಾನು ಒಬ್ಬ ರೈತನ ಮಗನಾಗಿ ರೈತರ ಬಗ್ಗೆ ಮಾತನಾಡುತ್ತಿದ್ದೇನೆ ಎಂದರು.
ಸಮಾಜದ ಮೂಲೆಯಲ್ಲಿರುವ ಯುವ ಸಾಧಕರನ್ನು ಗುರುತಿಸಿ ಮುಖ್ಯ ವಾಹಿನಿಗೆ ತರುವ ಕೆಲಸ ಅದಮ್ಯ ಫೌಂಡೇಶನ್ ಮಾಡುತ್ತಿದ್ದು, ಅವರ ಕೆಲಸ ಶ್ಲಾಘನೀಯ. ಸತತವಾದ ಪರಿಶ್ರಮ ಒಂದೇ ಸಾಧನೆಯ ಮುಖ್ಯ ಅಸ್ತ್ರ. ತಂದೆ ತಾಯಿಗಳನ್ನು ಪೂಜ್ಯನಿಯ ಭಾವದಿಂದ ನೋಡಿಕೊಂಡು ಮೌಲ್ಯಯುತವಾಗಿ ಇಂದಿನ ಯುವ ಸಮೂಹ ಜೀವನ ನಡೆಸಬೇಕು ಎಂದು ತಿಳಿಸಿದ್ದಾರೆ.
ಅದಮ್ಯ ಫೌಂಡೇಶನ್ ಪ್ರಾರಂಭವಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅದಮ್ಯೋತ್ಸವ ಕಾರ್ಯಕ್ರಮದಲ್ಲಿ ಯುವ ಸಾಧಕರಿಗೆ ಸನ್ಮಾನ ಹಮ್ಮಿಕೊಳ್ಳಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದ ಯುವಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಕಳೆದ ವರ್ಷ ಪುಲ್ವಾಮಾ ದಾಳಿಯಲ್ಲಿ ವೀರ ಮರಣ ಹೊಂದಿದ್ದ ಭಾರತೀಯ ಯೋದರಿಗೆ ಗೀತ ನಮನ ಸಲ್ಲಿಸಲಾಗಿದೆ.
ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಅಥಣಿಯ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಮಾತನಾಡಿ, ಇಂದಿನ ಯುವಕರು ಬೇಡದ ಕೆಲಸಗಳಿಂದ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅಂತವರಿಗೆ ಬದುಕಿನ ಮೌಲ್ಯಗಳ ಜೊತೆಗೆ ಆಧ್ಯಾತ್ಮಿಕ ಸಾರ ನೀಡಬೇಕಾದ ಅವಶ್ಯಕತೆ ಇದೆ. ಈ ಕೆಲಸವನ್ನು ಕಳೆದ ಒಂದು ವರ್ಷದಿಂದ ಅದಮ್ಯ ಫೌಂಡೇಶನ್ ಮಾಡುತ್ತಿದೆ ಎಂದರು.