ಭೋಪಾಲ್: ಯುವಕನೊಬ್ಬ ವಿಧವೆಯೊಬ್ಬರನ್ನು ತುಂಬಾ ಪ್ರೀತಿಸುತ್ತಿದ್ದನು. ಆದರೆ ಆಕೆ ಮದುವೆಯಾಗಲು ನಿರಾಕರಿಸಿದ್ದಕ್ಕೆ ಆಕೆಯ ಮುಂದೆಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಉಜ್ಜೈನ್ನಲ್ಲಿ ನಡೆದಿದೆ.
ಛತಾರ್ಪುರದ ಜಿತೇಂದ್ರ ವರ್ಮಾ ಆತ್ಮಹತ್ಯೆಗೆ ಶರಣಾದ ಯುವಕ. ಮಹಿಳೆ ಪತಿ ಮೃತಪಟ್ಟ ನಂತರ ತನ್ನ ಸಂಬಂಧಿಕರ ಮನೆಯಲ್ಲಿಯೇ ವಾಸಿಸುತ್ತಿದ್ದರು. ಆಕೆಗೆ ಒಬ್ಬ ಮಗಳಿದ್ದಳು. ಆದರೆ ವಿಧವೆಗೆ ಇನ್ನೂ ಚಿಕ್ಕ ವಯಸ್ಸು. ಹೀಗಾಗಿ ಮನೆಯವರು ಮತ್ತೊಂದು ಮದುವೆ ಮಾಡಬೇಕು ಎಂದು ನಿರ್ಧರಿಸಿದ್ದರು.
ಇದೇ ಸಮಯದಲ್ಲಿ ಜಿತೇಂದ್ರ ವರ್ಮಾ ಸಹ ವಿಧವೆಯನ್ನು ಭೇಟಿಯಾಗಿದ್ದು, ಮದುವೆಯಾಗುವಂತೆ ಕೇಳಿಕೊಂಡಿದ್ದಾನೆ. ಇದಕ್ಕೆ ಮಹಿಳೆ ನಿರಾಕರಿಸಿದ್ದಾರೆ. ಆದರೂ ಜಿತೇಂದ್ರ ಆಕೆಯನ್ನು ಹಿಂಬಾಲಿಸಿಕೊಂಡು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದನು. ಶನಿವಾರ ಜಿತೇಂದ್ರ ಅವಳನ್ನು ಮತ್ತೊಮ್ಮೆ ಮದುವೆಯಾಗಲು ಕೇಳಿಕೊಂಡಿದ್ದಾನೆ. ಆಗಲೂ ಆಕೆ ನಿರಾಕರಿಸಿದ್ದಾರೆ. ಇದರಿಂದ ನೊಂದ ಯುವಕ ಆಕೆಯ ಮುಂದೆಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಶನಿವಾರ ಬೆಳಿಗ್ಗೆ ಜಿತೇಂದ್ರ ಇದ್ದಕ್ಕಿದ್ದಂತೆ ನಮ್ಮ ಮನೆಗೆ ಬಂದು ಏಕಾಏಕಿ ಅಡುಗೆ ಮನೆಗೆ ನುಗ್ಗಿದ. ನಂತರ ಮದುವೆಯಾಗುವಂತೆ ಬಲವಂತ ಮಾಡುತ್ತಿದ್ದನು ಎಂದು ಮಹಿಳೆ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಆಕೆ ಮದುವೆಯಾಗಲು ನಿರಾಕರಿಸಿದಾಗ ಜಿತೇಂದ್ರ ಪಿಸ್ತೂಲನ್ನು ತೆಗೆದುಕೊಂಡು ಗುಂಡು ಹಾರಿಸಿಕೊಂಡಿದ್ದಾನೆ. ಗುಂಡಿನ ಸದ್ದು ಕೇಳಿದ ನೆರೆಹೊರೆಯವರು ಸ್ಥಳಕ್ಕೆ ಧಾವಿಸಿದ್ದಾರೆ. ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪೊಲೀಸರು ಸ್ಥಳದಲ್ಲಿದ್ದ ಜನರ ಹೇಳಿಕೆಗಳನ್ನು ಸಹ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.