ಹಾಸನ: ಮನೆಯಲ್ಲಿ ಮಲಗಿದ್ದ ಯುವಕನೊಬ್ಬನನ್ನು ಹೊರಕ್ಕೆ ಎಳೆದು ತಂದು ಕತ್ತಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಗರದ ಬಂಬೂ ಬಜಾರ್ ಪ್ರದೇಶದಲ್ಲಿ ನಡೆದಿದೆ.
ಬಂಬೂ ಬಜಾರ್ ನಿವಾಸಿಯಾದ ಕಿರಣ್ (35) ಕೊಲೆಯಾದ ಯುವಕ. ಮಂಗಳವಾರ ಮಧ್ಯಾಹ್ನ ಕ್ಷುಲ್ಲಕ ವಿಚಾರಕ್ಕೆ ಕಿರಣ್ ಸ್ಥಳೀಯರೊಂದಿಗೆ ಜಗಳವಾಡಿಕೊಂಡಿದ್ದನು. ಇದೇ ವಿಚಾರಕ್ಕೆ ಕೋಪಗೊಂಡ ಹಂತಕರು ತಡರಾತ್ರಿ ಮನೆಗೆ ನುಗ್ಗಿ, ಮನೆಯಲ್ಲಿ ಮಲಗಿದ್ದ ಕಿರಣ್ ಮೇಲೆ ಎರಗಿ ಮನಬಂದಂತೆ ಹಲ್ಲೆ ನಡೆಸಿ ಬಳಿಕ ಕತ್ತಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕಿರಣ್ ಕ್ಷುಲ್ಲಕ ವಿಚಾರಕ್ಕೆ ಪದೇ ಪದೇ ಜನರಿಗೆ ಕಿರುಕುಳ ನೀಡುತ್ತಿದ್ದನು. ಹೀಗಾಗಿ ಕಿರಣ್ ಕಾಟ ತಾಳಲಾರದೇ ಗೊತ್ತಿರುವವರೇ ಕೊಲೆ ಮಾಡಿದ್ದಾರೆ. ಅಲ್ಲದೇ ಸ್ಥಳೀಯರಾದ ಶ್ರೀನಿವಾಸ್, ರವಿ ಹಾಗೂ ನಾಗರಾಜ್ ಸೇರಿದಂತೆ ಹಲವರಿಂದ ಕೃತ್ಯ ನಡೆದಿದೆ ಎನ್ನುವ ಶಂಕೆ ವ್ಯಕ್ತವಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆ ಸಂಬಂಧ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv