ಹಾಸನ: ಅಪಘಾತದಲ್ಲಿ (Accident) ಮೆದುಳು ನಿಷ್ಕ್ರಿಯಗೊಂಡು ಪ್ರಜ್ಞಾಹೀನ ಸ್ಥಿತಿ ತಲುಪಿದ್ದ ಪುತ್ರನ ಅಂಗಾಂಗ ದಾನ (Organ Donation) ಮಾಡುವ ಮೂಲಕ ಮಗನ ಸಾವಿನಲ್ಲೂ ಪೋಷಕರು ಸಾರ್ಥಕತೆ ಮೆರೆದಿರುವುದು ಚನ್ನರಾಯಪಟ್ಟಣ ತಾಲ್ಲೂಕಿನ ಮಾಚಭೂವನಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ಸುರೇಶ್ ಹಾಗೂ ಶಾಂತಲಾ ದಂಪತಿ ಪುತ್ರ ಸುಹಾಸ್ಗೌಡ ಬೆಂಗಳೂರಿನಲ್ಲಿ ಬ್ಯಾಟರಿ ವರ್ಕ್ ಶಾಪ್ನಲ್ಲಿ ಕೆಲಸ ಮಾಡಿಕೊಂಡಿದ್ದ. ಡಿ.9ರ ಸಂಜೆ ಬೈಕ್ನಲ್ಲಿ ಸುಹಾಸ್ಗೌಡ ಹಾಗೂ ಸ್ನೇಹಿತ ಹರ್ಷ ಬೆಂಗಳೂರಿನಿಂದ ಮಹದೇಶ್ವರ ಬೆಟ್ಟಕ್ಕೆ ತೆರಳುತಿದ್ದ ವೇಳೆ ಟಿ.ನರಸೀಪುರ ಬಳಿಯ ತಿರುವಿನಲ್ಲಿ ಬೈಕ್ಗೆ ಕಾರು ಡಿಕ್ಕಿಯಾಗಿ ಸುಹಾಸ್ಗೌಡ ತೀವ್ರವಾಗಿ ಗಾಯಗೊಂಡಿದ್ದ.
ಮೂರು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಹಾಸ್ಗೌಡ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾರೆ. ವಯಸ್ಸಿಗೆ ಬಂದ ಮಗನನ್ನು ಕಳೆದುಕೊಂಡ ನೋವಿನಲ್ಲೂ ಮಗನ ಅಂಗಾಂಗ ದಾನ ಮಾಡಿ ಪೋಷಕರು ಸಾರ್ಥಕತೆ ಮೆರೆದಿದ್ದಾರೆ.