ಮಂಗಳೂರು: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರು ಮಗದೊಮ್ಮೆ ಸಿಎಂ ಆಗಿರೋದಕ್ಕೆ ಮಂಗಳೂರಿನ ಕದ್ರಿ ಯೋಗೀಶ್ವರ ಮಠದಲ್ಲಿ ಸಂಭ್ರಮ ನೆಲೆಸಿದೆ. ಉತ್ತರಪ್ರದೇಶದಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದ್ದು, 37 ವರ್ಷಗಳ ಬಳಿಕ ಸತತ ಎರಡನೇ ಬಾರಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಯೋಗಿ ಆದಿತ್ಯನಾಥ್ 2ನೇ ಬಾರಿಗೆ ಸಿಎಂ ಆಗಿದ್ದರಿಂದ ಮಂಗಳೂರಿನ ಕದ್ರಿ ಯೋಗೀಶ್ವರ ಮಠದಲ್ಲಿ ತುಂಬಾ ಸಂಭ್ರಮ ಮನೆ ಮಾಡಿದೆ.
ಹೌದು. ನಾಥಪಂಥದ ಮೂಲಮಠವಾದ ಉತ್ತರದ ತ್ರಯಂಬಕೇಶ್ವರದ ಗೋರಖ್ಪುರ ಮಠಕ್ಕೂ ಮಂಗಳೂರಿನ ಕದ್ರಿಯ ಯೋಗೀಶ್ವರ ಮಠಕ್ಕೂ ನಿಕಟವಾದ ಸಂಬಂಧವಿದೆ. ಯೋಗೀಶ್ವರ ಮಠದ ಪೀಠಾಧಿಪತಿಯನ್ನು ಆಯ್ಕೆ ಮಾಡುವ ಅಧಿಕಾರವಿರುವುದು ಗೋರಖ್ ಪುರದ ಮಠಾಧೀಶರಿಗೆ ಮಾತ್ರ. ಆದ್ರೆ ಈಗಿನ ಗೋರಖ್ಪುರ ಮಠದ ಮಠಾಧೀಶರಾಗಿರುವುದು ಯೋಗಿ ಆದಿತ್ಯನಾಥರು. 2016ರಲ್ಲಿ ಕದ್ರಿ ಮಠದ ಪೀಠಾಧಿಪತಿ ನಿರ್ಮಲನಾಥ ಜೀಯವರ ಪಟ್ಟಾಭಿಷೇಕವನ್ನು ಯೋಗಿ ಆದಿತ್ಯನಾಥರವರೇ ನೆರವೇರಿಸಿದ್ದರು. ಆಗ 12 ವರ್ಷಗಳಿಗೊಮ್ಮೆ ಉತ್ತರದಿಂದ ಬರುವ ಝಂಡಿಯಲ್ಲೂ ಯೋಗಿ ಆದಿತ್ಯನಾಥರು ಭಾಗವಹಿಸಿದ್ದರು.
ಯೋಗಿ ಆದಿತ್ಯನಾಥರು 2017ರಲ್ಲಿ ಮೊದಲ ಬಾರಿಗೆ ಉತ್ತರ ಪ್ರದೇಶದ ಸಿಎಂ ಆದರು. ಇದೀಗ 2ನೇ ಬಾರಿ ಅವರೇ ಉತ್ತರ ಪ್ರದೇಶದ ಅಧಿಕಾರದ ಚುಕ್ಕಾಣಿ ಹಿಡಿದಿರೋದು ಕದ್ರಿ ಯೋಗೀಶ್ವರ ಮಠಕ್ಕೆ ಹೆಮ್ಮೆಯ ವಿಚಾರವಾಗಿದೆ. ಆ ಕಾರಣದಿಂದಲೇ ಕದ್ರಿ ಯೋಗೀಶ್ವರ ಮಠದಲ್ಲಿ ಸಂಭ್ರಮ ಕಳೆಗಟ್ಟಿದೆ. ಯೋಗಿ ಆದಿತ್ಯನಾಥ್ 5 ವರ್ಷ ಪೂರ್ಣಾವಧಿ ಅಧಿಕಾರ ನಡೆಸಲಿ ಎಂದು ಪೂಜೆ ಮಾಡಲಾಗುತ್ತಿದೆ. ಇದನ್ನೂ ಓದಿ: 5 ವರ್ಷ ಪೂರ್ಣಗೊಳಿಸಿ ಮತ್ತೆ ಅಧಿಕಾರಕ್ಕೇರಿದ ಮೊದಲ ಯುಪಿ ಸಿಎಂ ಯೋಗಿ
ದಕ್ಷಿಣ ಭಾರತಕ್ಕೆ ಯೋಗಿ ಆದಿತ್ಯನಾಥ್ ಬಂದರೆ ಕದ್ರಿ ಯೋಗೀಶ್ವರ ಮಠಕ್ಕೆ ಭೇಟಿ ನೀಡಿಯೇ ನೀಡುತ್ತಾರೆ. ಆದಿತ್ಯನಾಥ್ ಬರುತ್ತಾರೆಂದರೆ ಕದ್ರಿ ಗುಡ್ಡದಲ್ಲಿರುವ ನಾಥಪಂಥದ ಯೋಗೀಶ್ವರ ಮಠದಲ್ಲಿ ಸಂಭ್ರಮ ಕಳೆ ಕಟ್ಟುತ್ತದೆ. ಇದನ್ನೂ ಓದಿ: ಸ್ಮಾರ್ಟ್ಸಿಟಿ ಕಾಮಗಾರಿಯಿಂದ ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಕಂಟಕ