ನೆಲಮಂಗಲ: ಜನರಿಂದ ಅಕ್ರಮವಾಗಿ ಹಣ ಪಡೆದು ಕಾರುಗಳನ್ನು ನೀಡಿ ವ್ಯವಹಾರ ನಡೆಸುತ್ತಿದ್ದ ಯೆಲ್ಲೋ ಎಕ್ಸ್ ಪ್ರೆಸ್ ಕಂಪನಿಯನ್ನು ಸಿಐಡಿ ಅಧಿಕಾರಿಗಳು ಸೀಜ್ ಮಾಡಿ ತನಿಖೆ ನಡೆಸುತ್ತಿದ್ದಾರೆ. ಆದರೆ ಕಂಪನಿ ಇದ್ದಕ್ಕಿದ್ದಂತೆ ರಾತ್ರೋ ರಾತ್ರಿ ಖಾಲಿ ಮಾಡಲು ಯತ್ನಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರದ ಜಕ್ಕಸಂದ್ರದಲ್ಲಿ ಯೆಲ್ಲೋ ಎಕ್ಸ್ ಪ್ರೆಸ್ ಕಂಪನಿಯ ಕಚೇರಿ ಇದೆ. ಆದರೆ ರಾತ್ರೋ ರಾತ್ರಿ ಕಂಪನಿ ವಸ್ತುಗಳನ್ನು ಸಾಗಾಟ ಮಾಡಲು ಯತ್ನಿಸಿದೆ. ಇದನ್ನು ಕಂಡ ಗ್ರಾಹಕರು ನಮಗೆ ನ್ಯಾಯ ಸಿಗುವವರೆಗೂ ನಾವು ಬಿಡುವುದಿಲ್ಲ ಎಂದು ತಡೆದಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಹೂಡಿಕೆದಾರರು ಇಂದು ಬೆಳಗ್ಗೆ ಕಂಪನಿ ಮುಂದೆ ಜಮಾಯಿಸಿ ಆತಂಕ ವ್ಯಕ್ತಪಡಿಸಿದ್ದಾರೆ.
ಈ ವೇಳೆ ನೆಲಮಂಗಲ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾತ್ರೋ ರಾತ್ರಿ ಕಂಪನಿಯ ಪೀಠೋಪಕರಣಗಳನ್ನು ಸಾಗಿಸುವ ಅಗತ್ಯವೇನಿತ್ತು ಎಂದು ಗ್ರಾಹಕರು ಪ್ರಶ್ನಿಸಿದ್ದಾರೆ. ಅಲ್ಲದೆ ತನಿಖೆ ಹಂತದಲ್ಲಿ ಈ ರೀತಿಯ ಬೆಳವಣಿಗೆ ಕಂಡು, ಕಾರು ಖರೀದಿಸಿ ಹಣ ಹೂಡಿಕೆ ಮಾಡಿದ್ದ ಗ್ರಾಹಕರು ಇನ್ನಷ್ಟು ಆತಂಕಕ್ಕೆ ಒಳಗಾಗಿದ್ದಾರೆ.