ಬೆಂಗಳೂರು: ನನ್ನ ಮೇಲೆ ಮಹಿಳೆಯೊಬ್ಬರು ದೂರು ಕೊಟ್ಟಿದ್ದು, ಆದರೆ ಆ ಅರೋಪ ನಿರಾಧಾರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ (BS Yediyurappa) ಹೇಳಿದ್ದಾರೆ.
ತಮ್ಮ ಮೇಲಿನ ಆರೋಪ ಸಂಬಂಧ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಯಾರೋ ಒಬ್ಬ ಹೆಣ್ಣು ಮಗಳು ಅನ್ಯಾಯವಾಗಿದೆ ಎಂದು ನನ್ನ ಬಳಿ ಬಂದಿದ್ದರು. ತಾಯಿ- ಮಗಳು ಅನೇಕ ಬಾರಿ ಬಂದು ಹೋಗುತ್ತಿದ್ದರು. ಆದರೆ ನಾನು ಅವರನ್ನು ಮಾತಾಡಿಸೋ ಪ್ರಯತ್ನ ಮಾಡಿಲ್ಲ. ಹೀಗೆ ಒಂದಿನ ಕಣ್ಣೀರು ಹಾಕುತ್ತಿರುವುದನ್ನು ನೋಡಿ ಒಳಗೆ ಕರೆದುಕೊಂಡು ಹೋಗಿ ಏನು ಸಮಸ್ಯೆ ಅನ್ನೋದನ್ನು ಕೇಳಿದೆ. ಈ ವೇಳೆ ಅವರು ನಮಗೆ ತುಂಬಾ ಅನ್ಯಾಯವಾಗಿದೆ ಎಂದು ಹೇಳಿದರು. ಆಗ ನಾನು ಪೊಲೀಸ್ ಕಮಿಷನರ್ಗೆ ಕರೆ ಮಾಡಿ ಇವರಿಗೆ ಅನ್ಯಾಯವಾಗಿದೆ ಅಂತೆ ಸ್ವಲ್ಪ ನ್ಯಾಯ ಒದಗಿಸಿಕೊಡಿ ಎಂದು ಹೇಳಿದೆ. ಅಲ್ಲದೆ ತಾಯಿ- ಮಗಳನ್ನು ಇಬ್ಬರನ್ನೂ ಕಳುಹಿಸಿದೆ ಎಂದರು.
ಇದಾದ ಮೇಲೆ ಆಕೆ ನನ್ನ ಮೇಲೆಯೇ ಏನೇನೋ ಮಾತಾಡೋಕೆ ಶುರು ಮಾಡಿದಳು. ಆಗ ಮಹಿಳೆ ಯಾಕೋ ಆರೋಗ್ಯವಂತೆಯಾಗಿಲ್ಲ ಅನ್ನೋದು ನನಗೆ ಗೊತ್ತಾಯಿತು. ಹೀಗಾಗಿ ಅತೀ ಹೆಚ್ಚು ಮಾತಾಡಿದರೆ ಉಪಯೋಗ ಇಲ್ಲವೆಂದು ನಾನು ಅವರನ್ನು ಪೊಲೀಸ್ ಕಮಿಷನರ್ ಬಳಿ ಕಳುಹಿಸಿಕೊಟ್ಟೆ. ಅವರು ಕUಡ ಎಲ್ಲಾ ವಿಚಾರಗಳನು ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಈಗ ಇದು ಬೇರೆ ರೀತಿ ಏನೋ ಮಾಡಿ ನನ್ನ ಮೇಲೆ ಎಫ್ಐಆರ್ ಆಗಿದೆ. ಕಾನೂನು ಪ್ರಕಾರ ಏನು ಎದುರಿಸಬೇಕೋ ಎದುರಿಸ್ತೀನಿ. ಆದರೆ ಒಬ್ಬರಿಗೆ ಉಪಕಾರ ಮಾಡಲು ಹೋಗಿ ಹೀಗಾಗಿದೆ. ಆದರೆ ಮಹಿಳೆಗೆ ಕಷ್ಟ ಇದೆ ಅಂತಾ ಹೇಳಿ ಸ್ವಲ್ಪ ಹಣನೂ ಕೊಟ್ಟು ಕಳುಹಿಸಿದ್ದೀನಿ. ಇಷ್ಟೆಲ್ಲಾ ಮಾಡಿದರೂ ಹೀಗೆ ಈ ರೀತಿಯ ಬೆಳವಣಿಗೆ ನಡೆದಿದೆ. ಇದೆಲ್ಲಾ ನಾವು ನಿರೀಕ್ಷೆ ಮಾಡಿರಲಿಲ್ಲ ಎಂದು ಬಿಎಸ್ವೈ ವಿವರಿಸಿದರು. ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಮಾಜಿ ಸಿಎಂ ಬಿಎಸ್ವೈ ವಿರುದ್ಧ ಪೋಕ್ಸೊ ಕೇಸ್
ಪೋಕ್ಸೋ ಕೇಸ್: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಪೋಕಸೋ ಪ್ರಕರಣ (POCSO Case) ದಾಖಲಿಸಲಾಗಿದೆ. ಕಳೆದ ಫೆಬ್ರವರಿಯಲ್ಲಿ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿದೆ. ಈ ಸಂಬಂಧ ಸಂತ್ರಸ್ತೆಯ ತಾಯಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಮಾಜಿ ಸಿಎಂ ವಿರುದ್ಧ ಪೋಕ್ಸೊ ಮತ್ತು 354 (ಎ) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.