ಹಾಸನ: ಸಂಪುಟ ವಿಸ್ತರಣೆಯಾದ ಬಳಿಕ ಅಸಮಾಧಾನ ಸ್ಪೋಟವಾಗುತ್ತೋ, ಇಲ್ಲಾ ಕೆಪಿಸಿಸಿ ಅಧ್ಯಕ್ಷರ ನೇಮಕ ಬಳಿಕ ಅಸಮಾಧಾನ ಆಗುತ್ತೋ ನೋಡೋಣ ಎಂದು ಸಿಎಂ ಪುತ್ರ ವಿಜಯೇಂದ್ರ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿ ಸವಾಲು ಹಾಕಿದ್ದಾರೆ.
ನಗರದಲ್ಲಿ ಮಾತನಾಡಿದ ವಿಜಯೇಂದ್ರ ಅವರು, ಕೆಲ ಶಾಸಕರು ಪ್ರತ್ಯೇಕ ಸಭೆ ಸೇರಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಅವರವರ ಅಭಿಪ್ರಾಯ ಹೇಳಲು ಸಭೆ ಸೇರಿದ್ದಾರೆ. 6 ರಂದು ಸಿಎಂ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳಿದ್ದಾರೆ. ಸಿಎಂ ಮತ್ತು ರಾಷ್ಟ್ರಾಧ್ಯಕ್ಷರು ಸಂಪುಟದ ಗೊಂದಲವನ್ನು ಬಗೆಹರಿಸಲಿದ್ದಾರೆ ಎಂದರು.
ಉಪಚುನಾವಣೆಯಲ್ಲಿ ಗೆದ್ದು ಬಂದವರಿಗೆ ಸಚಿವ ಸ್ಥಾನ ನೀಡಬೇಕು. ಹೀಗಾಗಿ ಎಲ್ಲಾ ಶಾಸಕರಿಗೂ ಇದರ ಅರಿವಿದೆ. ಹೈದರಾಬಾದ್ ಕರ್ನಾಟಕ, ಬಾಂಬೆ ಕರ್ನಾಟಕ, ಕರಾವಳಿ ಕರ್ನಾಟಕ ಎಲ್ಲರಿಗೂ ಸಂತೃಪ್ತಿ ಆಗುವ ನಿಟ್ಟಿನಲ್ಲಿ ಸರ್ಕಾರ ರಚನೆ ಆಗಲಿದೆ. ಗುರುವಾರ ಎಲ್ಲ ಸಮಸ್ಯೆ ಬಗೆ ಹರಿಯಲಿದೆ. ಎಲ್ಲರೂ ಸಮಾಧಾನ ಆಗುವ ರೀತಿ ಸಂಪುಟ ವಿಸ್ತರಣೆ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಸಿದ್ದರಾಮಯ್ಯ ಅವರ ಹೇಳಿಕೆಗೆ ಟಾಂಗ್ ಕೊಟ್ಟ ವಿಜಯೇಂದ್ರ ಅವರು, ಸಂಪುಟ ವಿಸ್ತರಣೆಯಾದ ಬಳಿಕ ಅಸಮಾಧಾನ ಸ್ಫೋಟವಾಗುತ್ತೆ ಎಂದು ಸಿದ್ದರಾಮಯ್ಯ ಹೇಳಿಕೆದ್ದಾರೆ. ಸಂಪುಟ ವಿಸ್ತರಣೆಯಾದ ಬಳಿಕ ಅಸಮಾಧಾನ ಸ್ಫೋಟವಾಗುತ್ತೋ, ಇಲ್ಲಾ ಕೆಪಿಸಿಸಿ ಅಧ್ಯಕ್ಷರ ನೇಮಕ ಬಳಿಕ ಅಸಮಾಧಾನ ಆಗುತ್ತೋ ನೋಡೋಣ ಎಂದರು.