ಬೆಂಗಳೂರು: ರಮೇಶ್ ಜಾರಕಿಹೊಳಿ ನಮ್ಮ ನಾಯಕರಲ್ಲ. ಅವರು ನನ್ನ ಸ್ನೇಹಿತರು ಅಷ್ಟೇ. ಯಡಿಯೂರಪ್ಪ, ಅಮಿತ್ ಶಾ, ಜೆ.ಪಿ.ನಡ್ಡಾ, ನಳಿನ್ ಕುಮಾರ್ ಕಟೀಲ್ ನಮ್ಮ ನಾಯಕರು ಎಂದು ಸಚಿವ ಬಿ.ಸಿ.ಪಾಟೀಲ್ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಕಾಂಗ್ರೆಸ್ಸಿನಲ್ಲಿ ಬಂಡಾಯದ ಬಾವುಟ ಹಾರಿಸಿದ ದಿನದಿಂದ ಪ್ರತಿ ಹಂತದಲ್ಲೂ ಬಿ.ಸಿ.ಪಾಟೀಲ್ ರಮೇಶ್ ಜಾರಕಿಹೊಳಿಯನ್ನು ನೆರಳಿನಂತೆ ಹಿಂಬಾಲಿಸಿದ್ದರು. ಅನರ್ಹರಾಗಿ ನ್ಯಾಯಾಲಯದಲ್ಲೂ ಕೇಸು ಎದುರಿಸುವಾಗಲು ರಮೇಶ್ ಜಾರಕಿಹೊಳಿಯೇ ನಮ್ಮ ನಾಯಕ ಎಂದು ಎಲ್ಲರು ಹಿಂಬಾಲಿಸಿದ್ದರು. ಉಪ ಚುನಾವಣೆಯಲ್ಲಿ ಗೆದ್ದು ಸಚಿವ ಸ್ಥಾನಕ್ಕಾಗಿ ಕಾಯುತ್ತಿದ್ದಾಗಲೂ ಜಾರಕಿಹೊಳಿ ನಾಯಕತ್ವದಲ್ಲೇ ಸಂಪುಟ ವಿಸ್ತರಣೆಗೆ ಲಾಬಿ ಮಾಡಿದ್ದರು.
ಆದರೆ ಚುನಾವಣೆ ಗೆದ್ದು ಸಚಿವರಾದ ಮರು ದಿನವೇ ಬಿ.ಸಿ.ಪಾಟೀಲ್ ಹೊಸ ಬಾಂಬ್ ಹಾಕಿದ್ದಾರೆ. ರಮೇಶ್ ಜಾರಕಿಹೊಳಿ ನನ್ನ ನಾಯಕನಲ್ಲ ಅವರು ನನ್ನ ಸ್ನೇಹಿತ ಅಷ್ಟೇ ಎನ್ನುವ ಮೂಲಕ ನಿಯತ್ತು ಬದಲಿಸಿ ಅಚ್ಚರಿ ಮೂಡಿಸಿದ್ದಾರೆ.