ದಾವಣಗೆರೆ: ಜಿಲ್ಲೆಯಲ್ಲಿ ವರ್ಷದ ಮೊದಲ ಮಳೆಯಾಗಿದ್ದು, ಸುಮಾರು 1 ಗಂಟೆಗೂ ಹೆಚ್ಚು ಕಾಲ ಸುರಿದ ಸಾಧಾರಣ ಮಳೆ ಬಿಸಿಲಿನ ಕಾವಿಗೆ ಕಾದಿದ್ದ ಭೂಮಿಗೆ ತಂಪೆರೆದಿದೆ.
ದಾವಣಗೆರೆ, ಚನ್ನಗಿರಿ, ಹೊನ್ನಾಳಿ, ಮಾಯಕೊಂಡ ಸೇರಿದಂತೆ ಹಲವೆಡೆ ವರುಣನ ಆಗಮನವಾಗಿದೆ. ಕಳೆದ 3 ತಿಂಗಳಿಂದ ವಿಶ್ರಾಂತಿ ಪಡೆದಿದ್ದ ಮಳೆರಾಯ ಈಗ ಮಳೆ ಸುರಿಸಿದ್ದಾನೆ. ಇದು ವರ್ಷದ ಮೊದಲ ಮಳೆಯಾಗಿದ್ದು, ಜಿಲ್ಲೆಯ ಜನರ ಮೊಗದಲ್ಲಿ ಮಂದಹಾಸ ಮೂಡಿದೆ.
ಕೆಲ ಭಾಗದಲ್ಲಿ ಜಮೀನುಗಳಲ್ಲಿ ಬೆಳೆಗಳನ್ನು ಕಟಾವು ಮಾಡಲಾಗಿತ್ತು. ಆದರೆ ಮಳೆ ಬಂದಿದನ್ನ ನೋಡಿದ ರೈತರು ಎಲ್ಲಿ ಹೆಚ್ಚು ಮಳೆ ಬಂದು ಬೆಳೆ ಹಾಳಾಗುತ್ತದೋ ಎಂಬ ಆತಂಕದಲ್ಲಿ ಇದ್ದರು. ಸಾಧಾರಣ ಮಳೆಯಾದ ಕಾರಣ ಬಿಸಿಲಿನ ತಾಪಕ್ಕೆ ಬೇಸತ್ತ ಜನರಿಗೆ ತಂಪಾದಂತಾಗಿದೆ. ಇತ್ತ ಮಳೆಯಿಂದ ವಾತಾವರಣ ಕೂಡ ತಂಪಾಗಿದ್ದು, ಜನರ ಮೊಗದಲ್ಲಿ ಖುಷಿ ತಂದಿದೆ. ವರ್ಷಧಾರೆಯಿಂದ ಬೇಸಿಗೆ ಬಿಸಿಲಿಗೆ ಹೈರಾಣಾಗಿದ್ದ ಜನರಿಗೆ ಸಂತಸವಾಗಿದೆ.