ಯತ್ನಾಳ್ ಕೊಟ್ಟಿದ್ದ ಉತ್ತರ ಪತ್ರ ಬಹಿರಂಗ – ಯಡಿಯೂರಪ್ಪ, ವಿಜಯೇಂದ್ರ ಮೇಲೆ ಚಾರ್ಜ್‌ಶೀಟ್‌

Public TV
1 Min Read
BSY YATNAL

ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಫೆ. 12ರಂದು ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿಗೆ ಕೊಟ್ಟಿದ್ದ ಉತ್ತರದ ಪತ್ರ ಬಹಿರಂಗವಾಗಿದೆ. 26 ಅಂಶಗಳನ್ನು ಉಲ್ಲೇಖಿಸಿ 9 ಪುಟಗಳ ಉತ್ತರ ಕೊಟ್ಟಿದ್ದ ಯತ್ನಾಳ್, ಯಡಿಯೂರಪ್ಪ (Yediyurappa) ಹಾಗೂ ವಿಜಯೇಂದ್ರ (Vijayendra) ವಿರುದ್ಧ ಚಾರ್ಜ್‌ಶೀಟ್‌ ಹಾಕಿ ವಂಶಪಾರಂಪರ್ಯ ರಾಜಕಾರಣದ ಬಗ್ಗೆ ಉಲ್ಲೇಖಿಸಿದ್ದರು.

Yatnal

ನನ್ನ ಮೇಲಿನ ಆರೋಪಗಳು ವ್ಯಕ್ತಿ ಮತ್ತು ಕುಟುಂಬದಿಂದ ಬಂದಿವೆಯೇ ಹೊರತು ಪಕ್ಷದಿಂದಲ್ಲ. ನಾನು ಯಾವಾಗಲೂ ಪಕ್ಷದ ಸಿದ್ಧಾಂತ ಮತ್ತು ಹಿಂದುತ್ವದ ಕಾರಣಕ್ಕೆ ಕೆಲಸ ಮಾಡುತ್ತಿದ್ದೇನೆ. ನಾನು ಹಿಂದುತ್ವದ ಸಿದ್ಧಾಂತ ಮತ್ತು ಬಿಜೆಪಿ ತತ್ವಗಳಿಗೆ ಬದ್ಧನಾಗಿದ್ದೇನೆ. ಕರ್ನಾಟಕಕ್ಕೆ ತಟಸ್ಥ ವೀಕ್ಷಕರನ್ನು ನೇಮಿಸಬೇಕೆಂದು ನಾನು ಕೇಂದ್ರ ನಾಯಕತ್ವವನ್ನು ಒತ್ತಾಯಿಸುತ್ತೇನೆ ಎಂದು ಪತ್ರದಲ್ಲಿ ಕೇಳಿಕೊಂಡಿದ್ದರು. ಇದನ್ನೂ ಓದಿ: ಬಿಜೆಪಿಯಿಂದ ಬಸನಗೌಡ ಪಾಟೀಲ್‌ ಯತ್ನಾಳ್‌ ಉಚ್ಛಾಟನೆ

ನನ್ನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಕ್ಷದ ಹೈಕಮಾಂಡ್‌ಗೆ ಒತ್ತಾಯಿಸುತ್ತಿರುವ ಬಂಡಾಯಗಾರರ ಸಭೆಗಳು ಯಡಿಯೂರಪ್ಪನವರ ಮನೆಯಲ್ಲಿ ನಡೆದಿವೆ. ವಿಜಯೇಂದ್ರ ಕೂಡ ಆ ಸಭೆಯಲ್ಲಿ ಇದ್ದರು. ಬಿಜೆಪಿ ಕೇಂದ್ರ ನಾಯಕತ್ವವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಈ ಸಭೆಗಳಲ್ಲಿ ಭಾಗವಹಿಸಿದವರು ಬಿ.ಎಸ್.ಯಡಿಯೂರಪ್ಪ ಪಕ್ಷದಿಂದ ಹೊರ ನಡೆದು ಕೆಜೆಪಿಯನ್ನು (KJP) ಬೆಂಬಲಿಸಿದವರು ಎಂದು ಆರೋಪಿಸಿದರು. ಇದನ್ನೂ ಓದಿ: ಯತ್ನಾಳ್‌ ಉಚ್ಚಾಟನೆ | ಸುದೀರ್ಘ ಅವಧಿಯಿಂದ ಸ್ಥಿತಿ-ಗತಿಗಳನ್ನು ಅವಲೋಕಿಸಿ ತೆಗೆದುಕೊಂಡ ಕ್ರಮ – ವಿಜಯೇಂದ್ರ

ಕುಟುಂಬ ರಾಜಕಾರಣ, ಹೊಂದಾಣಿಕೆ ರಾಜಕಾರಣದ ಬಗ್ಗೆ ಮಾತನಾಡಿದ್ದೇನೆ ಎಂದು ಯತ್ನಾಳ್ ಸಮರ್ಥಿಸಿದರು. ಆದರೆ ಯತ್ನಾಳ್ ಉತ್ತರಕ್ಕೆ ಕೇರ್ ಮಾಡದ ಬಿಜೆಪಿ ಹೈಕಮಾಂಡ್ ಈಗ 6 ವರ್ಷಗಳ ಕಾಲ ಉಚ್ಚಾಟನೆ ಮಾಡಿದೆ. ಇದನ್ನೂ ಓದಿ: ಪಕ್ಷಕ್ಕೆ ದುಡಿದ ಯತ್ನಾಳ್‌ ಮತ್ತೆ ಬಿಜೆಪಿಗೆ ಬರುತ್ತಾರೆ: ರಮೇಶ್‌ ಜಾರಕಿಹೊಳಿ

Share This Article