ಮಡಿಕೇರಿ: ಜಿ.ಟಿ ದೇವೇಗೌಡ ಅವರು ಕಾಂಗ್ರೆಸ್ ಪಕ್ಷವನ್ನು ಸೇರಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಗ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ಮಡಿಕೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ಯಾರು ಶಾಶ್ವತ ಶತ್ರುಗಳಲ್ಲ. ಜನತಾ ಪರಿವಾರ ಇರುವಾಗಿನಿಂದಲೂ ಜಿಟಿಡಿ ಮತ್ತು ನಮ್ಮ ತಂದೆ ಒಟ್ಟಿಗೆ ಇದ್ದರು ಮತ್ತು ಒಟ್ಟಿಗೆ ಕೆಲಸ ಮಾಡಿದ್ದಾರೆ. ನಂತರ ಬೇರೆ ಪಕ್ಷಕ್ಕೆ ಹೋದರು. ಈಗಲೂ ಅವರಿಬ್ಬರೂ ವೈಯಕ್ತಿಕವಾಗಿ ಒಳ್ಳೆಯ ಸ್ನೇಹಿತರಿದ್ದಾರೆ. ಇದೀಗಾ ಕಾಂಗ್ರೆಸ್ ಪಕ್ಷದ ಬಗ್ಗೆ ಒಲವು ಹೊಂದಿದ್ದು, ಕಾಂಗ್ರೆಸ್ಗೆ ಬರಲು ನಿರ್ಧಾರಿಸಿದ್ದಾರೆ. ಈ ಕುರಿತು ಪಕ್ಷದ ನಾಯಕರು ನಿರ್ಧರಿಸುತ್ತಾರೆ. ನಾವೆಲ್ಲರೂ ಅದಕ್ಕೆ ಬದ್ಧರಾಗಿರುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪುಟ್ಕೋಸಿ ವಿರೋಧ ಪಕ್ಷದ ನಾಯಕನ ಸ್ಥಾನಕ್ಕಾಗಿ ಸರ್ಕಾರ ತೆಗೆದ ಮಹಾನ್ ನಾಯಕ – ಸಿದ್ದು ವಿರುದ್ಧ ಹೆಚ್ಡಿಕೆ ವಾಗ್ದಾಳಿ
ಇದೇ ವೇಳೆ ಸಿದ್ದರಾಮಯ್ಯ, ಡಿಕೆಶಿ ನಿನ್ನೆ ನಡೆದ ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸದೇ ಇರುವುದರ ಬಗ್ಗೆ ಕುರಿತಂತೆ ಮಾತನಾಡಿದ ಅವರು, ಭಾಗವಹಿಸದಿರುವುದು ಗೊಂದಲ ಅಥವಾ ಮುನಿಸಲ್ಲ ಅವರವರ ಕೆಲಸದ ಒತ್ತಡದಲ್ಲಿದ್ದರು. ಹೀಗಾಗಿ ಇಬ್ಬರು ಭಾಗವಹಿಸಲಾಗಿಲ್ಲ. ಆದರೆ ಇದನ್ನೇ ಬಣ ರಾಜಕೀಯ ಅಂತ ಬಿಂಬಿಸುವುದು ಬೇಡ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ರಾಷ್ಟ್ರರಾಜಕಾರಣಕ್ಕೆ ಸಿದ್ದರಾಮಯ್ಯ ಹೋಗ್ತಾರಾ?- ಡಿಕೆಶಿ ಪ್ರತಿಕ್ರಿಯಿಸಿದ್ದು ಹೀಗೆ
ಕಾಂಗ್ರೆಸ್ನವರು ನಾವೆಲ್ಲರೂ ಒಗ್ಗಟ್ಟಾಗಿದ್ದು ಕೆಲಸ ಮಾಡುತ್ತೇವೆ. ನಮ್ಮ ಗುರಿ ಇರುವುದು ಒಂದೇ 2023ರ ಚುನಾವಣೆಯಲ್ಲಿ ಕಾಂಗ್ರೆಸನ್ನು ಅಧಿಕಾರಕ್ಕೆ ತರುವುದು ಎಂದಿದ್ದಾರೆ.