ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡುವ ಕ್ಷೇತ್ರ ಯಾವುದು ಎನ್ನುವುದು ಇನ್ನೂ ಫೈನಲ್ ಆಗಿಲ್ಲ. ಆದರೆ ಪುತ್ರ ಯತೀಂದ್ರ ವರುಣಾದಿಂದಲೇ ತಂದೆ ಸ್ಪರ್ಧೆ ಮಾಡಲಿ ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ.
ಕೋಲಾರಾ? ವರುಣಾ ಈ ಪೈಕಿ ಯಾವುದನ್ನು ಆಯ್ಕೆ ಮಾಡಲಿ ಎಂಬ ಗೊಂದಲದಲ್ಲಿ ಸಿದ್ದರಾಮಯ್ಯ ಇದ್ದರೋ? ಅಥವಾ ವಿರೋಧಿಗಳು ಮತ್ತು ಹಿತಶತ್ರುಗಳ ದಾರಿ ತಪ್ಪಿಸಲು ಸಿದ್ದರಾಮಯ್ಯ ಹೀಗೆ ಮಾಡುತ್ತಿದ್ದಾರೋ ಎನ್ನುವುದು ಗೊತ್ತಾಗುತ್ತಿಲ್ಲ. ಹೀಗಾಗಿ ಈಗ ಎಲ್ಲರೂ ಸಿದ್ದರಾಮಯ್ಯ ನಿಮ್ಮ ಕ್ಷೇತ್ರ ಯಾವುದಯ್ಯ ಎಂದು ಕೇಳುವಂತಾಗಿದೆ.
ನಮ್ಮಪ್ಪ ವರುಣಾದಿಂದಲೇ ಸ್ಪರ್ಧೆ ಮಾಡಲಿ. ಕೋಲಾರ ಸೇರಿ ಹಲವು ಕ್ಷೇತ್ರಗಳು ಸಿದ್ದರಾಮಯ್ಯಗೆ ಸೇಫ್ ಇರಬಹುದು. ಆದರೆ ವರುಣಾದಿಂದಲೇ ಕಣಕ್ಕಿಳಿಯಲಿ ಎನ್ನುವುದು ನನ್ನಾಸೆ. ನಮ್ಮಪ್ಪ ವರುಣಾದಿಂದ ಕಣಕ್ಕಿಳಿದರೆ ನಾನು ಬೇರೆ ಕಡೆಯಿಂದ ಸ್ಪರ್ಧೆ ಮಾಡುವುದಿಲ್ಲ ಎಂಬುದನ್ನು ಯತೀಂದ್ರ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: 15 ಸಾವಿರ ಪ್ರಾಥಮಿಕ ಶಿಕ್ಷಕರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕ್ರಿಯೆಗೆ ಹೈಕೋರ್ಟ್ ತಡೆ
ತಾನು ವರುಣಾದಿಂದ ಕಣಕ್ಕಿಳಿದರೆ ಯತೀಂದ್ರ ರಾಜಕೀಯ ಭವಿಷ್ಯ ಮಸುಕಾಗಬಹುದು ಎಂಬ ಆತಂಕವೂ ಸಿದ್ದರಾಮಯ್ಯನವರಿಗೆ ಇದ್ದಂತೆ ಕಾಣುತ್ತಿದೆ. ಮತ್ತೊಂದು ಕಡೆ ಕೋಲಾರದಲ್ಲಿ ಸಿದ್ದರಾಮಯ್ಯ ಆಪ್ತ ಬಳಗ ಬೂತ್ ಮಟ್ಟದಲ್ಲಿ ಸರ್ವೇ ಕಾರ್ಯ ನಡೆಸುತ್ತಿದೆ. ಈ ಬೆಳವಣಿಗೆಗಳ ಬಗ್ಗೆ ಯತೀಂದ್ರ ಟೀಂ ಕಣ್ಣಿಟ್ಟಿರುವುದು ಸಿದ್ದರಾಮಯ್ಯ ಆಪ್ತರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಬಗ್ಗೆ ಸ್ವತಃ ಸಿದ್ದರಾಮಯ್ಯ ಬಳಿಯೇ ಅಸಮಾಧಾನ ತೋಡಿಕೊಂಡಿದ್ದಾರಂತೆ. ಆದರೆ ಯತೀಂದ್ರ ಜೊತೆ ಹೊಂದಿಕೊಂಡು ಹೋಗ್ರಪ್ಪ ಎಂದು ಸಿದ್ದರಾಮಯ್ಯ ತಿಳಿಹೇಳಿದ್ದಾರಂತೆ. ಇದು ಯತೀಂದ್ರ ಗಮನಕ್ಕೂ ಬಂದಿದೆ. ನಿಮ್ಮ ವಿಚಾರದಲ್ಲಿ ನಾನು ರಿಸ್ಕ್ ತಗೊಳ್ಳಲ್ಲ. ಇಲ್ಲ ಅಂದರೆ ಕೋಲಾರ ಸಹವಾಸವೇ ನಮಗೆ ಬೇಡ ಅಂತಾ ಸಿದ್ದರಾಮಯ್ಯ ಬಳಿ ಯತೀಂದ್ರ ಖಡಕ್ಕಾಗಿ ಹೇಳಿದ್ದಾರೆ ಎಂಬ ಮಾತು ಕೇಳಿ ಬಂದಿದೆ.
ಮಗನ ಮಾತು ಕೇಳಿ ವರುಣಾಗೆ ಹೋಗ್ಬೇಕೋ? ಸ್ನೇಹಿತರ ಮಾತು ಕೇಳಿ ಕೋಲಾರಕ್ಕೆ ಹೋಗ್ಬೇಕೋ ಎಂಬ ಧರ್ಮ ಸಂಕಟದಲ್ಲಿ ಈಗ ಸಿದ್ದರಾಮಯ್ಯ ಸಿಲುಕಿದ್ದಾರೆ ಎನ್ನಲಾಗಿದೆ. ಹೀಗಾಗಿಯೇ ಅಭಿಮಾನಿಗಳು ಕೇಳಿದರೂ ನೋಡೋಣ ಸುಮ್ನಿರಿ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ.