ಬೆಂಗಳೂರು: ಕಟೀಲು ನಾಲ್ಕನೇ ಮೇಳದ ಪ್ರಧಾನ ಭಾಗವತರಾಗಿದ್ದ ಕುಬಣೂರು ಶ್ರೀಧರರಾವ್ ತಮ್ಮ ಜೀವನ ಹಾಡನ್ನು ನಿಲ್ಲಿಸಿದ್ದಾರೆ. ತೆಂಕುತಿಟ್ಟಿನ ಶ್ರೇಷ್ಠ ಭಾಗವತರಾಗಿದ್ದ ಶ್ರೀಧರ್ ರಾವ್ ಅವರು ತೀವ್ರ ಜ್ವರದಿಂದಾಗಿ ಸೋಮವಾರ ಮುಂಜಾನೆ ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ.
ಕಾಸರಗೋಡು ಜಿಲ್ಲೆಯ ಕುಬಣೂರಿನಲ್ಲಿ ಹುಟ್ಟಿ, ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಡಿಪ್ಲೊಮಾ ಓದಿದ್ದರೂ ಅವರನ್ನು ಸೆಳೆದಿದ್ದು ಮಾತ್ರ ಯಕ್ಷಗಾನ ಕಲೆ. ಲಕ್ಷಣ ತೋರಿ ಉಪ್ಪಳ ಕೃಷ್ಣ ಮಾಸ್ತರ್ ಅವರಿಂದ ಮದ್ದಳೆ, ಟಿ. ಗೋಪಾಲಕೃಷ್ಣ ಮಯ್ಯ ಹಾಗೂ ಮಾಂಬಾಡಿ ನಾರಾಯಣ ಭಾಗವತರಿಂದ ಯಕ್ಷಗಾನ ಭಾಗವತಿಕೆ ಕಲಿತ ಇವರು ಟಿ. ರಾಘವ ಮಾಸ್ತರ್ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿದ್ದರು.
ಆರಂಭದಲ್ಲಿ ಕದ್ರಿ, ನಂದಾವರ, ಅರುವ, ಬಪ್ಪನಾಡು, ಕಾಂತಾವರ ಮೇಳದಲ್ಲಿ ತಿರುಗಾಟ ನಡೆಸಿ ಕಳೆದ ಎರಡೂವರೆ ದಶಕಗಳಿಂದ ಕಟೀಲು ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು 27 ವರ್ಷದಿಂದ ‘ಯಕ್ಷ ಪ್ರಭ’ ಮಾಸ ಪತ್ರಿಕೆಯ ಸಂಪಾದಕ ಮತ್ತು ಪ್ರಕಾಶಕರಾಗಿದ್ದರು.
2016ರ ನವೆಂಬರ್ ನಲ್ಲಿ ಕಟೀಲು ಕ್ಷೇತ್ರದ ಸರಸ್ವತೀ ಸದನದಲ್ಲಿ ‘ಶ್ರೀಧರಾಯಣ’ ಹೆಸರಿನಲ್ಲಿ ವಿಶೇಷ ಕಾರ್ಯಕ್ರಮ ನಡೆಸಿ ಕುಬಣೂರು ಶ್ರೀಧರ ರಾವ್ ಅವರನ್ನು ಅಭಿನಂದಿಸಲಾಗಿತ್ತು.
https://youtu.be/jpbuW4IZV1Q
https://youtu.be/1Cm7i2RU4zo