ಮೈಸೂರು: ದಸರಾದ ಪ್ರಮುಖ ಆಕರ್ಷಣೆಯಾದ ಗಜಪಡೆಗಳನ್ನು ಯದುವಂಶದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಆರೈಕೆ ಮಾಡಿದ್ದಾರೆ.
ದಸರಾ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಅರ್ಜುನ ಅಂಡ್ ಟೀಂನ ಆನೆಗಳಿಗೆ ಮೈಸೂರು ಮಹಾರಾಜರು ಖುದ್ದು ಆರೈಕೆ ಮಾಡಿದರು. ಈ ವೇಳೆ ಅರ್ಜುನ ಆನೆಗೆ ಕಬ್ಬು, ಬೆಲ್ಲ ಹಾಗೂ ಬಾಳೆ ಹಣ್ಣನ್ನು ನೀಡಿ ಆಶೀರ್ವಾದ ಪಡೆದುಕೊಂಡಿದ್ದಾರೆ. ದಸರಾದಲ್ಲಿನ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿಯು ವಿಶ್ವದಲ್ಲಿಯೇ ಪ್ರಖ್ಯಾತಿ ಪಡೆದುಕೊಂಡಿದೆ. ಈ ಬಾರಿಯು ಸಹ ಅರ್ಜುನ ದೇವಿ ಚಾಮುಂಡೇಶ್ವರಿಯನ್ನು ಹೊರಲಿದ್ದಾನೆ. ಹೀಗಾಗಿ ಅರ್ಜುನ ಹಾಗೂ ಇತರೆ ಆನೆಗಳಿಗೆ ಹೆಚ್ಚಿನ ಆರೈಕೆ ಮಾಡಲಾಗುತ್ತಿದೆ.
ಈ ಕುರಿತು ತಮ್ಮ ಫೇಸ್ ಬುಕ್ ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿರುವ ಅವರು, ಮೈಸೂರಿನ ಸಂಸ್ಕೃತಿ ಹಾಗೂ ಸಂಪ್ರದಾಯ ಪರಂಪರೆಗಳಲ್ಲಿ ಆನೆಗಳು ಪ್ರಮುಖ ಪಾತ್ರ ವಹಿಸುತ್ತವೆ. ದಸರಾ ಮಹೋತ್ಸವಕ್ಕೆ ಆಗಮಿಸಿರುವ ಅರ್ಜುನ ಹಾಗೂ ಇತರೆ ಆನೆಗಳ ಗಜಪಡೆಯನ್ನು ನೋಡಿ, ಅವುಗಳಿಗೆ ಆಹಾರ ನೀಡಿದ್ದಕ್ಕೆ ತುಂಬಾ ಸಂತೋಷವಾಗಿದೆ ಎಂದು ಬರೆದುಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv