ಮೈಸೂರು: ಯದುವಂಶದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈಗ ಹಳೆ ಮೈಸೂರು ಭಾಗದ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ.
ಯದುವೀರ್ ಅವರಿಗೆ ಪ್ರವಾಸೋದ್ಯಮ ಇಲಾಖೆ ಸರ್ಕಾರ ಬ್ರಾಂಡ್ ಅಂಬಾಸಿಡರ್ ಆಗುವಂತೆ ಮನವಿ ಮಾಡಿತ್ತು. ಈ ಕುರಿತು ಸ್ವತಃ ಸಚಿವ ಸಾ ರಾ ಮಹೇಶ್ ಅವರು ಪ್ರಸ್ತಾಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಚಿವರು ಮಾಡಿದ್ದ ಮನವಿಗೆ ಯದುವೀರ್ ಪ್ರತಿಕ್ರಿಯಿಸಿದ್ದಾರೆ.
ಯದುವೀರ್ ಅವರು ದಕ್ಷಿಣ ಭಾರತದ ಮಾದರಿಯಲ್ಲಿ ಹಳೆ ಮೈಸೂರಿನ ಅಭಿವೃದ್ಧಿಗೆ ಚಿಂತನೆ ನಡೆಸಿದ್ದು, ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಮತ್ತು ಕೊಡಗು ಭಾಗದ ಪ್ರವಾಸೋದ್ಯಮ ರಾಯಭಾರಿಯಾಗಲು ಒಪ್ಪಿಗೆ ಸೂಚಿಸಿದ್ದಾರೆ. ಈ ಬಗ್ಗೆ ಪತ್ರದ ಮೂಲಕ ಯದುವೀರ್ ಸಾ.ರಾ. ಮಹೇಶ್ ಅವರಿಗೆ ತಿಳಿಸಿದ್ದಾರೆ.
ಪತ್ರದಲ್ಲಿ ಏನಿದೆ?
ತಾವು ಮೈಸೂರು ಅರಮನೆಗೆ ಭೇಟಿ ನೀಡಿ, ನಮ್ಮ ಅಭಿನಂದನೆಗಳು ತಿಳಿಸಿದ್ದಕ್ಕೆ ಅಭಿನಂದನೆಗಳು. ಮೈಸೂರು ಜಿಲ್ಲೆಯ ಪ್ರವಾಸೋದ್ಯಮ ರಾಯಭಾರಿಯಾಗುವಂತೆ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ನನ್ನ ಕೃತಜ್ಞತೆ. ನನ್ನ ನಗರಕ್ಕೆ ಸೇವೆ ಸಲ್ಲಿಸುವ ಹಾಗೂ ಮೈಸೂರು ನಗರವನ್ನು ದಕ್ಷಿಣ ಭಾರತದ ಪ್ರವಾಸೋದ್ಯಮ ಕೇಂದ್ರವಾಗಿ ಮಾಡುವ ಕಾರ್ಯದಲ್ಲಿ ಪಾಲ್ಗೊಳ್ಳುವ ಅವಕಾಶ ನನಗೆ ದೊರೆತಿರುವುದು ಸಂತೋಷದ ವಿಷಯ.
ಈ ಕಾರ್ಯವನ್ನು ಸಾಧಿಸಲು ನನಗೆ ಸ್ಪಷ್ಟ ಉದ್ದೇಶಗಳನ್ನು ಹಾಗೂ ಖಚಿತವಾದ ಗುರಿಯನ್ನು ಹೊಂದಿರುವ ಅಗತ್ಯವಿದೆ. ನಾವು ಈ ನಿಟ್ಟಿನಲ್ಲಿ ರಚನಾತ್ಮಕವಾಗಿ ಹಾಗೂ ಪರಸ್ಪರ ಹಿತಾಸಕ್ತಿಗಳಿಗೆ ಅನುಗುಣವಾಗಿ ಮುಂದುವರಿಯುವ ಸಲುವಾಗಿ ತಾವು ತಮ್ಮ ವಿಭಾಗದ ಸಂಬಂಧಪಟ್ಟ ಅಧಿಕಾರಿಗಳ ಸಭೆಯನ್ನು ಏರ್ಪಡಿಸಿದರೆ ಉತ್ತಮ. ಈ ಉದ್ದೇಶವನ್ನು ಕಾರ್ಯರೂಪಕ್ಕೆ ತರುವ ಸಲುವಾಗಿ ಪ್ರವಾಸೋದ್ಯಮ ವಿಭಾಗದೊಂದಿಗೆ ಕಾರ್ಯೋನ್ಮುಖನಾಗುವ ದಿನವನ್ನು ಎದುರು ನೋಡುತ್ತಿದ್ದೇನೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv