– ಪತ್ನಿಯ ಪೂಜಾ ಫೋಟೋಗಳನ್ನು ಸೋಶಿಯಲ್ ಮಿಡಿಯಾಕ್ಕೆ ಹಾಕಿ ವಿಶ್ ಮಾಡಿದ್ರು ಮಹಾರಾಜ
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗೌರಿ ಹಬ್ಬದ ಸಂಭ್ರಮ ಮನೆಮಾಡಿದೆ. ಹೀಗಾಗಿ ಇಂದು ಮೈಸೂರು ಅರಮನೆಯಲ್ಲಿ ಯದುವಂಶದ ಮಹಾರಾಣಿ ತ್ರಿಷಿಕಾ ಒಡೆಯರ್ರಿಂದ ಗೌರಿ ಪೂಜೆ ನೆರವೇರಿದೆ.
ಅರಮನೆಯ ಒಳಭಾಗದಲ್ಲಿ ತ್ರಿಷಿಕಾಕುಮಾರಿ ಒಡೆಯರ್ ಅವರು ಸಂಪ್ರದಾಯಬದ್ಧವಾದ ಗೌರಿ ಪೂಜೆ ನೆರವೇರಿಸಿದರು. ಗೌರಿ ಪೂಜೆಯ ನಂತರ ಅವರು ಅರಮನೆಗೆ ಬಂದಿದ್ದ ಮುತ್ತೈದೆಯರಿಗೆ ಬಾಗಿನ ನೀಡಿ ಶುಭಾಶಯ ಕೋರಿದ್ರು.
ಪತ್ನಿಯ ಪೂಜಾ ಕೈಂಕರ್ಯಗಳನ್ನ ಯದುವೀರ್ ಒಡೆಯರ್ ಅವರು ತಮ್ಮ ಫೇಸ್ಬುಕ್, ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಅಲ್ಲದೇ ನಾಡಿನ ಸಮಸ್ತ ಜನತೆಗೆ ಗೌರಿ ಹಬ್ಬದ ಶುಭಾಶಯಗಳು ಅಂತ ತಿಳಿಸಿದ್ದಾರೆ.
ಮೈಸೂರಿನ ಎರಡು ಕಡೆಗಳಲ್ಲಿ ಇವತ್ತು ಮಾದರಿಯುತವಾಗಿ ಗೌರಿ – ಗಣೇಶ ಹಬ್ಬ ಆಚರಿಸಲಾಯಿತು. ಪೌರಕಾರ್ಮಿಕ ಮಹಿಳೆಯರಿಗೆ ಬಾಗಿನ ನೀಡಿ ಗೌರಿ ಹಬ್ಬ ಆಚರಿಸಿದರೆ, ಮತ್ತೊಂದು ಕಡೆ ಮುಸ್ಲಿಂ ಮತ್ತು ಹಿಂದೂ ಯುವಕರು ಜೊತೆಯಾಗಿ ಹಬ್ಬ ಆಚರಿಸಿದರು. ಮೈಸೂರು ಮಹಾ ನಗರ ಪಾಲಿಕೆ ಸದಸ್ಯ ಮಾ.ವಿ. ರಾಮಪ್ರಸಾದ್ ಪೌರಕಾರ್ಮಿಕರೊಂದಿಗೆ ಆಚರಿಸಿದ್ದಾರೆ. ಈ ವೇಳೆ ಪೌರ ಕಾರ್ಮಿಕ ಮಹಿಳೆಯರಿಗೆ ಸೀರೆ, ಅರಶಿನ ಕುಂಕುಮ, ಬಳೆ, ಹಣ್ಣು, ಹೂವು ಇರುವ ಬಾಗಿನ ನೀಡಲಾಯಿತು. ಸುಮಾರು 30 ಕ್ಕೂ ಹೆಚ್ಚು ಮಹಿಳಾ ಪೌರಕಾರ್ಮಿಕರಿಗೆ ಬಾಗಿನ ನೀಡಿ ಸಿಹಿ ತಿನಿಸಿ ಹಬ್ಬದ ಶುಭಾಶಯ ಕೋರಿದರು. ಮೈಸೂರಿನ ವಿದ್ಯಾರಣ್ಯಪುರಂ ನ ತಗಡೂರು ರಾಮಚಂದ್ರ ರಾವ್ ಉದ್ಯಾನವನದಲ್ಲಿ ಈ ಹಬ್ಬದ ಆಚರಣೆ ನಡೆಯಿತು.
ಗೌರಿ ಗಣೇಶ ಹಬ್ಬದಲ್ಲಿ ಹಿಂದೂ ಮುಸ್ಲಿಂ ಯುವಕರು ಜೊತೆಯಾಗಿ ಹಬ್ಬ ಆಚರಿಸಿದರು. ಗಣೇಶನಿಗೆ ಪೂಜೆ ನೆರವೇರಿಸುವ ಮೂಲಕ ಭಾವೈಕ್ಯತೆ ಮೆರೆದರು. ಮೈಸೂರಿನ ಅಗ್ರಹಾರ ವೃತ್ತದಲ್ಲಿ ಮೈಸೂರು ಪ್ರಜ್ಞಾವಂತ ಯುವಕರ ವೇದಿಕೆಯಿಂದ ಭಾವೈಕ್ಯತೆಯ ಹಬ್ಬ ಆಚರಿಸಲಾಯಿತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv