ಮೈಸೂರು: ರಾಜವಂಶಸ್ಥ ಯದುವೀರ್ ಒಡೆಯರ್ ನಗರದ ದೇವರಾಜ ಮಾರುಕಟ್ಟೆಗೆ ತಮ್ಮ ಪತ್ನಿ ತ್ರಿಷಿಕಾ ಅವರ ಜೊತೆ ಭೇಟಿ ನೀಡಿದ್ದರು.
ಮಾರುಕಟ್ಟೆ ಕಟ್ಟಡ ಕೆಡುವ ವಿಚಾರದಲ್ಲಿ ರಾಜಮನೆತನ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಮಾರುಕಟ್ಟೆ ಕಟ್ಟಡದ ಸ್ಥಿತಿ ತಿಳಿಯಲು ಪತ್ನಿ ಸಮೇತರಾಗಿ ಯದುವೀರ್ ಮಾರುಕಟ್ಟೆಗೆ ಭೇಟಿ ನೀಡಿದ್ದರು. ಮಾರುಕಟ್ಟೆಯಲ್ಲಿ ಯದುವೀರ್ ದಂಪತಿ ಕಂಡು ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ಅಚ್ಚರಿಗೊಂಡರು.
ಸಾಮಾನ್ಯರಂತೆ ಮಾರುಕಟ್ಟೆಯಲ್ಲಿ ಓಡಾಡಿದ ಯದುವೀರ್ ದಂಪತಿ, ವ್ಯಾಪಾರಿಗಳ ಬಳಿ ಮಾತುಕತೆ ನಡೆಸಿ ಕಟ್ಟಡದ ಬಗ್ಗೆ ಮಾಹಿತಿ ಪಡೆದರು. ಮಾರುಕಟ್ಟೆಯ ವ್ಯಾಪಾರಿಗಳ ಅಂಗಡಿಯ ಮುಂದೆ ಕುಳಿತು ಅವರ ಬಳಿ ಮಾತನಾಡಿದ್ದಾರೆ.
ಇದೇ ವೇಳೆ ಮಾರುಕಟ್ಟೆಯಲ್ಲಿ ಸೊಪ್ಪು, ಹಣ್ಣು ಮತ್ತು ತರಕಾರಿ ಖರೀದಿಸಿದ್ದರು. ವ್ಯಾಪಾರಿಗಳು ಅವರಿಂದ ಹಣ ಪಡೆಯಲು ನಿರಾಕರಿಸಿದ್ದರು. ಆದರೂ ತ್ರಿಷಿಕಾ ಅವರು ಬಲವಂತವಾಗಿ ಹಣವನ್ನು ನೀಡಿದ್ದಾರೆ. ಬಳಿಕ ಮಾರುಕಟ್ಟೆ ಹೊರಗೆ ಬಂದು ಗುರು ಸ್ವೀಟ್ನಲ್ಲಿ ಮೈಸೂರು ಪಾಕ್ ಖರೀದಿಸಿದರು. ರಾಜವಂಶಸ್ಥರ ಸರಳತೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.