ಯಾದಗಿರಿ: ಬುದ್ಧಿವಾದ ಹೇಳಿದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಶಹಪುರ ತಾಲೂಕಿನ ಅರಳಹಳ್ಳಿ ಗ್ರಾಮದಲ್ಲಿ ನಡೆದಿದೆ.
ಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಮೃತ ಲಕ್ಷ್ಮಿ ಕಲಬುರಗಿಯ ಎನ್.ವಿ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿ ಓದುತ್ತಿದ್ದಳು. ಕಲಬುರಗಿಯ ಬಾಲಕಿಯರ ಮೆಟ್ರಿಕ್ ಪೂರ್ವ SCST ಹಾಸ್ಟೆಲ್ ನಲ್ಲಿ ವಾಸವಿದ್ದ ಲಕ್ಷ್ಮಿ, ಕಳೆದ ಒಂದು ವಾರದ ಹಿಂದೆ ತನ್ನ ಸ್ನೇಹಿತೆಯ ಮೊಬೈಲ್ ಕದ್ದು ಸಿಕ್ಕಿಹಾಕಿಕೊಂಡಿದ್ದಳು.
ಈ ವಿಚಾರವಾಗಿ ಲಕ್ಷ್ಮಿಯನ್ನು ಕರೆದು ಹಾಸ್ಟೆಲ್ ವಾರ್ಡನ್ ಬುದ್ಧಿವಾದ ಹೇಳಿದ್ದರು. ಇದರಿಂದ ಕಳೆದ ಎರಡು ದಿನಗಳಿಂದ ಲಕ್ಷ್ಮಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಳು ಎನ್ನಲಾಗುತ್ತಿದೆ. ನಿನ್ನೆ ತನ್ನ ಸ್ವಂತ ಊರು ಅರಳಹಳ್ಳಿಗೆ ಲಕ್ಷ್ಮಿ ಬಂದಿದ್ದು, ಇಂದು ಬೆಳಗ್ಗೆ ತನ್ನ ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ಬಿ ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.