ಯಾದಗಿರಿ: ಸಿಎಂ ಬಿಎಸ್ವೈ ಅವಧಿ ಮುಗಿದ ನಂತರ ರಾಜ್ಯದಲ್ಲಿ ದಲಿತರಿಗೆ ಸಿಎಂ ಪಟ್ಟ ಸಿಗಲಿದೆ ಎಂದು ಶಾಸಕ ರಾಜುಗೌಡ ಭವಿಷ್ಯ ನುಡಿದಿದ್ದಾರೆ.
ಯಾದಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದಲಿತರ ಪರ ರಾಜುಗೌಡ ಬ್ಯಾಟಿಂಗ್ ಮಾಡಿದ್ದಾರೆ. ದಲಿತರು ಸಿಎಂ ಆಗಬೇಕಾದರೆ ಅದು ಬಿಜೆಪಿಯಿಂದಲೇ ಸಾಧ್ಯ. ಬೇರೆ ಪಕ್ಷದಲ್ಲಿ ಆಗುವುದಿಲ್ಲ. ಈಗ ನಾವೆಲ್ಲ ಸಿಎಂ ಬಿಎಸ್ವೈ ಅವರ ಹೆಸರಿನಲ್ಲಿ ಶಾಸಕರಾಗಿದ್ದೇವೆ ಎಂದರು.
ಯಡಿಯೂರಪ್ಪನವರ ಅವಧಿ ಮುಗಿದ ನಂತರ ಬಿಜೆಪಿ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ದಲಿತರಿಗೆ ಸಿಎಂ ಸ್ಥಾನ ಸಿಗುತ್ತದೆ. ಬಿಜೆಪಿಯಿಂದಲೇ ದಲಿತರಿಗೆ ಒಳ್ಳೆಯ ಸ್ಥಾನಮಾನ ಸಿಗಲು ಸಾಧ್ಯ. ಕಾಂಗ್ರೆಸ್ ದಲಿತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ದಲಿತರ ಅಭಿವೃದ್ಧಿಯ ಬಗ್ಗೆ ಕಾಳಜಿ ತೋರಿಲ್ಲ. ಕಾಂಗ್ರೆಸ್ ಸಂಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬಂದರೂ ದಲಿತರಿಗೆ ಸಿಎಂ ಹಾಗೂ ಡಿಸಿಎಂ ಸ್ಥಾನವನ್ನು ನೀಡಿಲ್ಲ ಎಂದು ವಾಗ್ದಾಳಿ ಮಾಡಿದರು.
ಮಲ್ಲಿಕಾರ್ಜುನ ಖರ್ಗೆ ಅವರು ಹಲವಾರು ವರ್ಷ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದಾರೆ. ಆದರೆ ದುಡಿದವರಿಗೆ ಸಿಎಂ ಸ್ಥಾನ ನೀಡಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಅನಿವಾರ್ಯ ಪರಿಸ್ಥಿತಿಯಲ್ಲಿ ಜಿ.ಪರಮೇಶ್ವರಗೆ ಡಿಸಿಎಂ ಸ್ಥಾನ ಕೊಟ್ಟಿದ್ದಾರೆ. ಆದರೆ 2013 ರಲ್ಲಿಯೇ ಪರಮೇಶ್ವರ್ ಅವರಿಗೆ ಕಾಂಗ್ರೆಸ್ ಸಿಎಂ ಮಾಡಿಲ್ಲವೆಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದರು.