ಯಾದಗಿರಿ: ಅಂತ್ಯಕ್ರಿಯೆಗಾಗಿ ಸ್ಮಶಾನದಲ್ಲಿ ಪೊಲೀಸರ ಮತ್ತು ಗ್ರಾಮಸ್ಥರ ಮಧ್ಯೆ ವಾಗ್ವಾದ ನಡೆದಿದ್ದು, ಶವವನ್ನ ಹೊತ್ತುಕೊಂಡು ಪೊಲೀಸರ ಜೊತೆ ಫೈಟ್ ಮಾಡುತ್ತಲೇ ಶವಸಂಸ್ಕಾರದ ಮಾಡಿದ ಘಟನೆ ನಡೆದಿದೆ.
ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ತುರಕಲ್ ದೊಡ್ಡಿ ಗ್ರಾಮದಲ್ಲಿ ಶುಕ್ರವಾರ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದ ಮುಸ್ಲಿಂ ವ್ಯಕ್ತಿಯೊಬ್ಬರು ನಿನ್ನೆ ಸಾವನ್ನಪ್ಪಿದ್ದರು. ಹೀಗಾಗಿ ಎಂದಿನಂತೆ ದಶಮಾನಗಳಿಂದ ಇದ್ದ ಸ್ಮಶಾನ ಸ್ಥಳದಲ್ಲಿ ಅಂತ್ಯಕ್ರಿಯೆಗಾಗಿ ಗ್ರಾಮಸ್ಥರು ಸಿದ್ಧತೆ ನಡೆಸುತ್ತಿದ್ದರು. ಇದಕ್ಕೆ ಏಕಾಏಕಿ ಬಂದು ಅಡ್ಡಗಟ್ಟಿದ ಪೊಲೀಸರು ಈ ಜಾಗದಲ್ಲಿ ಶವ ಸಂಸ್ಕಾರ ಮಾಡಲು ಅವಕಾಶವಿಲ್ಲ, ಇಲ್ಲಿ ಶವ ಸಂಸ್ಕಾರ ಮಾಡದಂತೆ ವ್ಯಕ್ತಿಯೊಬ್ಬರು ಕೋರ್ಟಿನಿಂದ ಸ್ಟೇ ತಂದಿದ್ದಾರೆ ಎಂದು ಗ್ರಾಮಸ್ಥರಿಗೆ ತಿಳಿಸಿದ್ದಾರೆ.
ಈ ವಿಚಾರಕ್ಕೆ ಗ್ರಾಮಸ್ಥರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಘಟನೆ ತೀವ್ರ ಸ್ವರೂಪ ಪಡೆದಿದ್ದರಿಂದ ಸ್ಮಶಾನಕ್ಕೆ ಎಂದು ಬಾರದ ಮುಸ್ಲಿಂ ಮಹಿಳೆಯರು ಸ್ಮಶಾನಕ್ಕೆ ಬಂದು, ತಾವೇ ಗುಂಡಿ ತೋಡಿ ಶವ ಸಂಸ್ಕಾರ ಮಾಡಿದ್ದಾರೆ. ಶವಸಂಸ್ಕಾರದ ವೇಳೆ ಪೊಲೀಸರ ಮತ್ತು ಗ್ರಾಮಸ್ಥರ ನಡುವೆ ತಳ್ಳಾಟ ಸಹ ನಡೆದಿದೆ.
ಈ ಸಂಬಂಧ ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.