ಯಾದಗಿರಿ: ಅಧಿಕಾರದಲ್ಲಿದ್ದಾಗ ಮಾಜಿ ಸಿಎಂ ಸಿದ್ದರಾಮಯ್ಯ ಸಹ ಸೋಷಿಯಲ್ ಮೀಡಿಯಾದಲ್ಲಿ ಟೀಕೆ ಮಾಡಿದ್ದಾರೆ ಎಂದು ಹತ್ತಾರು ಜನರನ್ನು ಬಂಧನ ಮಾಡಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಯಾದಗಿರಿಯ ಸರ್ಕಿಟ್ ಹೌಸ್ನಲ್ಲಿ ಮಾತನಾಡಿದ ಅವರು, ಎಲ್ಲಿಯೂ ಕವನ, ಕವಿತೆ ಬರೆದವರನ್ನು ಬಂಧನ ಮಾಡಿಲ್ಲ. ಯಾರು ರಾಷ್ಟ್ರ ವಿರೋಧ ಹೇಳಿಕೆ ನೀಡಿದ್ದಾರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಂಡಿದೆ. ಈ ಹಿಂದೆ ಸಿದ್ರಾಮಣ್ಣ ರಾಜ್ಯದ ಮುಖ್ಯಮಂತ್ರಿಯಾದಾಗ ಸೋಷಿಯಲ್ ಮೀಡಿಯಾದಲ್ಲಿ ಟೀಕೆ ಮಾಡಿದ್ದಾರೆ ಅಂತ ಹತ್ತಾರು ಜನ ಬಂಧನ ಮಾಡಿಸಿದ್ದರು. ಅದು ಪ್ರಜಾಪ್ರಭುತ್ವದ ಕಗ್ಗೊಲೆ ಅಲ್ವಾ ಎಂದು ಕಟೀಲ್ ಪ್ರಶ್ನೆ ಮಾಡಿದ್ದಾರೆ.
ಇದೇ ವೇಳೆ ಸದನದಲ್ಲಿ ಕುಮಾರಸ್ವಾಮಿ ಸಿರಾಜ್ ಬಿಸರಳ್ಳಿ ಕವನ ಓದಿದ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಸದನಕ್ಕೆ ಸಭಾಪತಿಗಳು ಸುಪ್ರೀಮ್, ಅವರು ಈ ಬಗ್ಗೆ ಯೋಚನೆ ಮಾಡುತ್ತಾರೆ ಕಾನೂನು ಮತ್ತು ಸಂವಿಧಾನದಲ್ಲಿ ಏನಿದೆ ಆ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.